CATEGORIES

NEWSLETTER


ವಿವೇಕ ಚೂಡಾಮಣಿ

ಗ್ರಂಥದ ಆರಂಭದ ಶ್ಲೋಕವು ಹೀಗಿದೆ
सर्व वेदांतसिद्धांत गोचरमं तमगोचरम् ।
गोविन्दं परमानन्दं सद्गुरुं प्रणतोस्म्हम् ॥१॥
ಗ್ರಂಥದ ಆರಂಭದಲ್ಲಿ ಶ್ರೀ ಶಂಕರರು ಗೋವಿಂದನಿಗೆ ತಮ್ಮ ನೆನೆಕೆಗಳನ್ನು ಸಲ್ಲಿಸಿದ್ದಾರೆ. ಶಂಕರಾಚಾರ್ಯರ ದೀಕ್ಷಾ ಗುರುಗಳ ಹೆಸರು ಗೋವಿಂದ ಭಗವಾತ್ಪಾದರೆಂದು ತಿಳಿಯಲಾಗಿದೆ. ಹಾಗೆಯೇ ಶ್ರೀ ಕೃಷ್ಣನು ಶಂಕರರ ಕುಲದೇವತೆಯೆಂದೂ ಗ್ರಂಥಾಂತರದಲ್ಲಿ ತಿಳಿದುಬರುತ್ತದೆ. ಅವರ ಹುಟ್ಟೂರಾದ ಕೇರಳ ರಾಜ್ಯದ ಕಾಲಟಿಯಲ್ಲಿ ಪೂರ್ಣಾ(ಪೆರಿಯಾರ್) ನದಿಯ ದಡದಲ್ಲಿ ಇರುವ ಶ್ರೀ ಕೃಷ್ಣನ ದೇವಾಲಯವನ್ನು ಇಂದಿಗೂ ಕಾಣಬಹುದು. ಗೋವಿಂದನೆಂದರೆ ಗೋಪಾಲನೂ ಆಗುವನು, ಬೆಟ್ಟಗಳ ಒಡೆಯನೂ ಆಗುವನು ಹಾಗೆಯೇ ಗುರು ಗೋವಿಂದ ಭಗವತ್ಪಾದರೂ ಆಗುವರು.
ಗುರುವಿನ ವಿಚಾರಕ್ಕೆ ಬಂದರೆ , ಶಂಕರರು ಸಹಜವಾಗಿ ಗ್ರಂಥದ ಮೊದಲಲ್ಲಿ ತಮ್ಮ ಗುರುಗಳನ್ನು ನೆನೆಪಿಸಿಕೊಂಡಿದ್ದಾರೆ.
ಆ ಗುರುಗಳಾದರೂ ಎಂತಹವರು ? ಅವರು ಕಣ್ಣಿಗೆ ಕಾಣುವವರಲ್ಲ, ಬುದ್ಧಿಗೆ ತಿಳಿಯುವವರಲ್ಲ, ಮಾತಿಗೆ ಸಿಲುಕುವವರಲ್ಲ, ಅವರ ದೇಹಕ್ಕೆ ಯಾವ ಆದರಣೆಯೂ ಇಲ್ಲ, ಅದು ಅಗೋಚರವಾದುದು ಮತ್ತು ಅಲೌಕಿಕವಾದು. ಹಾಗಾದರೆ ಶಂಕರರು ತಮ್ಮ ಗುರುಗಳನ್ನು ಕಂಡಿದ್ದಾದರೂ ಹೇಗೆ ? ಯಾವ ರೂಪದಲ್ಲಿ ಕಂಡುಕೊಂಡರು ?.
ಶಂಕರರಿಗೆ ತಮ್ಮ ಗುರುಗಳು ಕಾಣಿಸಿದ್ದು ಅರಿವಿನ ರೂಪದಲ್ಲಿ ಮತ್ತು ಜ್ಞಾನದ ಬೆಳಕಿನಲ್ಲಿ. ಜಗತ್ತಿನ ಎಲ್ಲಾ ಲೌಕಿಕ-ಪಾರಮಾರ್ಥಿಕ ಸಿದ್ಧಾಂತ-ವೇದಾಂತಗಳ ರೂಪದಲ್ಲಿ ಕಂಡರು .
ದೇಹಕೆ ಸಿಲುಕದ ಮನಸಿಗೆ ನಿಲುಕದ ಅರಿವಿಗೆ ತೋರುವ
ಗುರು ಗೋವಿಂದಗೆ ತಲೆ ಬಾಗಿಸುವೆ
ಎಂದು ಹೇಳುತ್ತಾ ಗುರುವನ್ನು ಅರಿವಿನ ರೂಪದಲ್ಲಿ ಕಂಡೆ ಎಂದು ಸಾರುತ್ತಾರೆ. ಯಾವ ವೇದಾಂತ-ಸಿಧ್ಧಾಂತಗಳು ನನ್ನ ಅರಿವಿಗೆ ಕಾರಣವಾದವೋ ಅದೇ ನನ್ನ ಗುರುವು ಮತ್ತು ಆ ತತ್ತ್ವಜ್ಞಾನವೇ ಗೋವಿಂದ ಗುರುಗಳೆಂದು
ಸೂಚ್ಯವಾಗಿ ಹೇಳುತ್ತಾರೆ. ಮಾತು-ಮನಸಿಗೆ ನಿಲುಕದೆ ವೇದಾಂತ-ಸಿದ್ಧಾಂತದ ಮೂಲಕ ಎಲ್ಲರಿಗೆ ಕಾಣುವಂತಹ ಅರಿವಿನ ಗುರುವಾದ ಗೋವಿಂದರಿಗೆ ನಮಿಸುತ್ತೇನೆ ಎಂದು ಶಂಕರರು ಆರಂಭಿಸುತ್ತಾರೆ. ಗುರು ಅನ್ನುವ ಪದಕ್ಕಾಗಲೀ ಅಥವಾ ಗುರುವಿನ ಲೌಕಿಕ ದೇಹಕ್ಕಾಗಲೀ ಹೆಚ್ಚು ಮಹತ್ವವಿಲ್ಲವೆಂಬುದನ್ನು ಶಂಕರರು ಈ ಸೂಕ್ತದ ಮೂಲಕ ಸೂಕ್ಷ್ಮವಾಗಿ ಹೇಳುತ್ತಾರೆ. ’ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ’ ಎಂಬ ದಾಸರ ಪದವೊಂದಿದೆ. ಗುರುವಿನ ಗುಲಾಮನಾಗುವುದು ಎಂದರೆ ಗುರುವಿನಲ್ಲಿರುವ ಅರಿವಿನ ಗುಲಾಮನಾಗುವುದು ಎಂದೇ ಅರ್ಥ. ಕೇವಲ ಗುರುವಿನ ಬಾಹ್ಯ ದೇಹದ ಸೇವೆ ಮಾಡಿಕೊಂಡು ಸಮಯ ತಳ್ಳಿದರೆ ತಿಳಿವು ಮೂಡುವುದಿಲ್ಲ , ಅದರೊಟ್ಟಿಗೆ ಆ ಸದ್ಗುರುವಿನಲ್ಲಿ ಅಡಕವಾಗಿರುವ ವಿದ್ಯೆಯನ್ನೂ ಸಂಪಾದಿಸಬೇಕು ಅಂತಹ ವಿದ್ಯೆಯೇ ನಿಜವಾದ ಗುರುವಿನ ರೂಪ ಎಂದು ಶಂಕರರು ಹೇಳುತ್ತಾರೆ.
ಕನ್ನಡದ ಮೇರು ಕಲಾವಿದ ರಾಜಕುಮಾರರು ಇಂದು ನಮ್ಮೊಂದಿಗಿಲ್ಲದಿರಬಹುದು, ಆದರೆ ಅವರ ಚಿತ್ರಗಳು, ಅಭಿನಯ ಅವರ ಹಾಡುಗಾರಿಕೆಯಿಂದ ಎಲ್ಲಾ ಕಾಲದಲ್ಲೂ ಅವರು ಜೀವಂತವಾಗಿರುತ್ತಾರೆ ಅದರ ಮೂಲಕವೇ ಅವರು ಗೋಚರಿಸುತ್ತಾರೆ. ಹಾಗೆಯೇ ಸದ್ಗುರುವೂ ಸಹ, ಅರಿವಿನ ಬೆಳಕನ್ನು ಚೆಲ್ಲುವ ಮೂಲಕ ವಿಷಯಾಸಕ್ತರಿಗೆ ಯಾವಾಗಲೂ ಕಾಣಿಸುತ್ತಾರೆ. ಗುರುವು ಹೇಗಿರಬೇಕು ಎಂಬುದಕ್ಕೂ ಇದೇ ಸೂಕ್ತವು ಅನ್ವಯವಾಗಬಲ್ಲುದು. ಗುರುವೆನಿಸಿಕೊಂಡವನು ತನ್ನ ಹಾವ-ಭಾವಗಳಿಂದಾಗಲೀ, ಹಣದ ಪ್ರಭಾವದಿಂದಾಗಲೀ ಅಥವಾ ರಾಜಕೀಯ ವಿಷಯಗಳಿಂದಾಗಲೀ ಅನೇಕ ಶಿಷ್ಯರನ್ನು ಸಂಪಾದಿಸಿಕೊಂಡರೆ ಕೊನೆಗೆ ಅಂತಹ ಶಿಷ್ಯರಿಂದಲೇ ಗುರುವೆಂಬ ಘನತೆಯನ್ನೂ ಕಳೆದುಕೊಳ್ಳುತ್ತಾನೆ. ಇಂದು ಇಂತಹ ಅನೇಕ ಗುರುಗಳನ್ನು ಕಾಣಬಹುದಾಗಿದೆ !. ಇಲ್ಲಿ ಸದ್ಗುರು ಶ್ರೀಧರರು ಹೇಳಿದ ವಾಕ್ಯವೊಂದನ್ನು ನೆನಪಿಸಿಕೊಳ್ಳಬಹುದು,
ಶತ್ರೋರಪಿ ಗುಣಾವಾಚ್ಯಾ ದೋಷಾವಾಚ್ಯಾ ಗುರೋರಪಿ |
ಯುಕ್ತಿಯುಕ್ತಂ ವಚೋಗ್ರಾಹ್ಯಂ ಬಾಲಾದಪಿ ಶುಕಾದಪಿ ||
ಗುರೋರಪ್ಯವಲಿಪ್ತಸ್ಯ ಕಾರ್ಯಾಕಾರ್ಯಮಜಾನತಃ|
ಅಪಾರ್ಥಪ್ರತಿಪನ್ನಸ್ಯ ನ್ಯಾಯ್ಯಂ ಭವತಿ ಶಾಸನಮ್ ||
“ಗುರು ಎಂದಾಕ್ಷಣ ಅವರ ಅಯೋಗ್ಯ, ಕೀಳು ವಿಚಾರಗಳು ತಿಳಿದಿದ್ದರೂ ಸಹ ಅವರನ್ನು ಅನುಸರಿಸುವುದು ತಪ್ಪು. ತನ್ನ ನಡತೆ ಮತ್ತು ಒಳ್ಳೆಯ ಗುಣಗಳಿಂದ ಯಾರು ಉತ್ತಮರೆನಿಸಿಕೊಳ್ಳುತ್ತಾರೋ ಅವರೇ ನಿಜವಾದ ಸದ್ಗುರುಗಳು”
ಎಂದು ಹೇಳುತ್ತಾರೆ. ನಮ್ಮ ಜಾತಿಯವರೆಂದೋ, ಮತ-ಧರ್ಮದವರೆಂದೋ ಕುರುಡು ಬುದ್ದಿಯಿಂದ ಯಾರೋ ಒಬ್ಬರನ್ನು ಶ್ರೀ ಶ್ರೀ ಶ್ರೀ ಜಗದ್ಗುರುವೆಂದು ಒಪ್ಪುವ ಬದಲು ಅಂತಹ ಗುರುವಿನಲ್ಲಿರುವ ಅರಿವನ್ನು ಒರೆಗೆ ಹಚ್ಚಬೇಕು ಎಂಬುದು ಮೇಲಿನ ಸೂಕ್ತಗಳ ಸಾರವಾಗಿದೆ. ಶಿಷ್ಯನು ಹೇಗಿರಬೇಕು ಎಂಬುದಕ್ಕೂ ಮೇಲಿನ ಸೂಕ್ತಗಳೇ ಮಾದರಿಯಾಗಿವೆ.
ನಮಗೂ ಸಹ ವಿವೇಕ ಚೂಡಾಮಣಿಯನ್ನು ಶ್ರೀ ಶಂಕರರು ಬರೆದಿದ್ದಾರೆ ಹಾಗಾಗಿ ಅದೊಂದು ಪವಿತ್ರ ಗ್ರಂಥ ಎನ್ನುವ ಭಾವನೆಗಿಂತಲೂ , ಅದರೊಳಗಿನ ಸತ್ವವನ್ನು ತಿಳಿದು ಅದರಲ್ಲಿ ಶಂಕರರನ್ನು ಕಂಡರೆ ನಾವು ನಿಜವಾದ ಗುರುವನ್ನು ಪಡೆದುಕೊಂಡಂತಾಗುತ್ತದೆ ಎನ್ನಬಹುದು. ಇಂದು ಗೋವಿಂದರಂತಹ ಗುರುಗಳು ಮತ್ತು ಜ್ಞಾನದಲ್ಲೇ ಗುರುವನ್ನು ಕಂಡ ಶಂಕರರಂತಹ ಶಿಷ್ಯರು ಸಿಗುವುದು ಬಲು ಕಷ್ಟ. ಮುಕ್ತಿ ಮಾರ್ಗಕ್ಕೆ ಅಥವಾ ನೆಮ್ಮದಿಯ ಬದುಕಿಗೆ ಆಧ್ಯಾತ್ಮವೇ ಅಂತಿಮವೆಂದೇನೂ ಇಲ್ಲ, ಎಲ್ಲರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಉತ್ತಮ ಸಾಧನೆಗೈಯಬಹುದಾಗಿದೆ ಅದರಿಂದಲೇ ನೆಮ್ಮದಿಯನ್ನೂ ಪಡೆಯಬಹುದಾಗಿದೆ. ಹಾಗೆ ಸಾಧಿಸಲು ಅನುಸರಿಸಬೇಕಾದ ಮಾರ್ಗಗಳು ನಮ್ಮ ವೇದೋಪನಿಷತ್ತುಗಳಲ್ಲಿದೆ. ಎಲ್ಲೆಲ್ಲೋ ತಡಕಾಡುವ ಬದಲು ನೇರವಾಗಿ ನಮ್ಮ ಸಂಸ್ಕೃತಿಯ ಬೇರನ್ನು ಅಪ್ಪಿಕೊಳ್ಳುವುದು ಉಚಿತವೇ ಆಗಿದೆ. ಅರಿವನ್ನು ಹಂಚುವ ಮತ್ತು ಪಡೆಯುವ ಕಾರ್ಯದಲ್ಲಿ ಗುರು-ಶಿಷ್ಯರಿಬ್ಬರಿಗೂ ಸ್ಥಿತಪ್ರಜ್ಞತೆಯ ಅಗತ್ಯವಂತೂ ಇದ್ದೇ ಇದೆ, ಅಲ್ಲಿ ಸ್ವಾರ್ಥಕ್ಕೆ ಅವಕಾಶವಿಲ್ಲ.
जंतूनां नरजन्म दुर्लभमतः पुंस्त्वं ततो विप्रता
तस्माद् वैदिकधर्ममार्गपरता विद्वत्वमस्मात् परम् ।
आत्मानात्मविवेचनं स्वनुभवो ब्रह्मात्मना संस्थितिः
मुक्तिर्नो शतकोटिजन्मसु कृतैः
ಗ್ರಂಥದ ಆರಂಭ ಶ್ಲೋಕವೇ ಚರ್ಚೆಗೀಡುಮಾಡುವಂತಹುದಾಗಿದೆ. ಸರಳವಾಗಿ ಈ ಸೂಕ್ತದ ಭಾವಾರ್ಥವನ್ನು ತಿಳಿಯುವುದಾದರೆ “ಪ್ರಾಣಿಗಳಿಗೆ ಮಾನವ ಜನ್ಮವು ದುರ್ಲಭ. ಅದರಲ್ಲಿ ಪುರುಷತ್ವ, ವಿಪ್ರತ್ವ, ಧರ್ಮಮಾರ್ಗ ಪರತ್ವ ಮತ್ತು ಶಾಸ್ತ್ರಾರ್ಥ ಜ್ಞಾನವು ಒಂದಕ್ಕಿಂತ ಒಂದು ಮಿಗಿಲಾದವುಗಳು ಮತ್ತು ಬೇಕೆಂದಾಗ ಸಿಗದಿರುವಂತಹವು. ಅದರಲ್ಲೂ ಅಳಿವು-ಉಳಿವುಗಳ ಅರಿವನ್ನು ತಿಳಿದು ಆತ್ಮಜ್ಞಾನವನ್ನು ಪಡೆಯುವುದು ಇನ್ನೂ ಮಿಗಿಲಾದುದು. ಇವೆಲ್ಲವೂ ನೂರುಕೋಟಿ ಜನ್ಮಗಳಲ್ಲಿ ಸಂಪಾದಿಸಿದ ಪುಣ್ಯಗಳಿಲ್ಲದೆ ದೊರೆಯಲಾರದು ” .
ಹುಟ್ಟುವ ಗುಣವುಳ್ಳ ಪ್ರಾಣಿಗಳಲ್ಲೆಲ್ಲಾ ಮಾನವ ಜನ್ಮವು ದೊಡ್ಡದು ಮತ್ತು ಬೇಕೆಂದಾಗಲೆಲ್ಲಾ ಸಿಗುವಂತಹುದಲ್ಲ. ಮಾನವ ಪ್ರಾಣಿಗೆ ದೊರಕುವಷ್ಟು ಸೌಕರ್ಯಗಳು ಬೇರೆ ಯಾವ ಪ್ರಾಣಿಗೂ ಸಿಗುವುದಿಲ್ಲ. ’ಮಾನವ ಜನ್ಮ ದೊಡ್ಡದು ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ ” ಎಂದು ದಾಸರು ಹಾಡಿದ್ದಾರೆ, ಹಾಗಾಗಿ ಬೇರೆ ಜನ್ಮಗಳೂ ಇದೆಯೆಂದಾಗುತ್ತದೆ. ಒಬ್ಬನಿಗೇ ಬೇರೆ ಜನ್ಮಗಳು ಇದೆ ಎಂದಾದಲ್ಲಿ ಜೀವಸ್ವರೂಪನಾದ ಆತ್ಮನು ಶರೀರಕ್ಕಿಂತಲೂ ಬೇರೆ ಎಂದಾಗುತ್ತದೆ. ಹಳೆಯದಾದ ಬಟ್ಟೆಯನ್ನು ತಗೆದುಹಾಕಿ ಹೊಸತನ್ನು ಉಡುವಂತೆ ಆತ್ಮವು ಒಂದೇ ಆದರೂ ಶರೀರವು ಹಲವು ರೂಪಗಳನ್ನು ಪಡೆಯುತ್ತದೆ ಎಂದು ತಿಳಿಯಬೇಕಾಗುತ್ತದೆ. ’ಪಡೆದುಕೊಂಡು ಬಂದದ್ದು’ ಎಂದು
ಹೇಳುವಾಗ ಎಲ್ಲಿಂದ ಪಡೆದುಕೊಂಡು ಬಂದದ್ದು ಎಂಬದೂ ಮುಖ್ಯವಾಗುತ್ತದೆ. ಮಾನವನಿಗೆ ಸಂಪಾದನೆಯಿಂದ ಬರುವುದಕ್ಕಿಂತಲೂ ಸಂದಾಯವಾಗಿ ಬಂದಿರುವುದೇ ಹೆಚ್ಚು. ಆಡುವ ಮಾತು, ಆಹಾರ ಪದ್ಧತಿ, ಉಡುಗೆ-ತೊಡುಗೆ ಮತ್ತು ತನ್ನ ಸುತ್ತಲಿನ ಪರಿಸರದಿಂದ ತಾನು ಪಡೆದುಕೊಂಡು ಬೆಳೆದು ಬಂದದ್ದು , ಇವೆಲ್ಲವೂ ಸಂದಾಯವಾಗಿಯೇ ಬರುವಂತಹವು. “ಅಪ್ಪನಂತೆ ಮಗನಿಗೂ ಮುಂಗೋಪ” ಎಂದು ಹೇಳುವುದನ್ನು ಕೇಳಿರುತ್ತೇವೆ. ಮಗನಿಗೆ ಅಪ್ಪನಿಂದ ಅಂತಹ ವಂಶವಾಹಿನಿಗಳು (Genes) ಹರಿದುಬಂದಿರುತ್ತವೆ. ತಾಯಿಯಿಂದಲೂ, ತಾತನಿಂದಲೂ ಬರಬಹುದು. ’ನಾನು ನಾನೇ’ ಎಂದು ಎಷ್ಟು ಹೇಳಿಕೊಂಡರೂ ಹಿಂತಿರುಗಿ ನೋಡಿದಾಗ ಪಡೆದುಕೊಂಡು ಬಂದಿರುವುದೆಷ್ಟು ಎಂಬುದು ಅರಿವಾಗುತ್ತದೆ. ಶತಾವಧಾನಿ ಗಣೇಶರು ಹೇಳುವಂತೆ “ಜನ್ಮಾಂತರಗಳನ್ನು ನಂಬದವರು ವಂಶವಾಹಿನಿಗಳನ್ನಾದರೂ ನಂಬಲೇಬೆಕು !” . ಮಾನವ ಜನ್ಮದ ಉಪಯೋಗಗಳು ನಮಗೆಲ್ಲಾ ಅನುಭದಿಂದಲೇ ತಿಳಿಯುತ್ತಿರುವುದರಿಂದ
’ಜಂತೂನಾಂ ನರಜನ್ಮ ದುರ್ಲಭಂ” ಎನ್ನುವುದನ್ನು ಮಾನವ ಪ್ರಾಣಿಗಳೆಲ್ಲರೂ ಒಪ್ಪಲೇಬೇಕಾಗುತ್ತದೆ.
ಮನುಷ್ಯ ಜನ್ಮವೇನೋ ದೊಡ್ಡದು ಆದರೆ ಪುರುಷನಾಗಿ ಹುಟ್ಟುವುದು ಅದಕ್ಕಿಂತಲೂ ಮಿಗಿಲಾದುದೆ ? !. ಹಲವು ಋಷಿಕೆಯರಿಂದ ರಚಿಸಲ್ಪಟ್ಟಿರುವ ಸೂಕ್ತಗಳನ್ನು ನಾವು ಋಗ್ವೇದದಲ್ಲಿಯೇ ಕಾಣಬಹುದು. ಮಹಿಳೆಯರಿಗೆ ವೇದಾಧ್ಯಯನದ ಜೊತೆಗೆ ಸಂಸ್ಕಾರಗಳಲ್ಲೂ ಸ್ವಾತಂತ್ರ್ಯವಿತ್ತು ಎನ್ನುವುದನ್ನು ಋಗ್ವೇದದ ಅಧ್ಯಯನದಿಂದಲೇ ತಿಳಿಯಬಹುದು. ಮನಗೆ ಬಂದ ಸೊಸೆಯನ್ನು ಸಾಮ್ರಾಜ್ಞಿಯಂತೆ (ರಾಣಿ) ಕಾಣು ಎಂದು ಋಗ್ವೇದದಲ್ಲಿ ಹೇಳಲಾಗಿದೆ. ಹಾಗಾದರೆ ಪುರುಷನಾಗಿ ಹುಟ್ಟುವುದು ಮಿಗಿಲೇಕೆ ? . ಪುರುಷನಾಗಿ ಹುಟ್ಟಿದರೂ ಪುರುಷತ್ವವನ್ನು ಮೈಗೂಡಿಸಿಕೊಳ್ಳದಿದ್ದರೆ ಆತನನ್ನೂ ಸ್ತ್ರೀ ಸ್ವಭಾವದಿಂದಲೇ ಗುರುತಿಸಬೇಕಾಗುತ್ತದೆ. ’ಕಿರಣ್ ಬೇಡಿ’ ಹೆಣ್ಣಾದರೂ ಅವರಲ್ಲಿದ್ದ ಪುರುಷತ್ವದಿಂದ ಅವರೊಬ್ಬ ಧೈರ್ಯಶಾಲಿ ಆರಕ್ಷಕ ಅಧಿಕಾರಿಯಾದರು. ಪುರುಷತ್ವ ಎನ್ನುವುದು ಗಂಡಸುತನ ಎನ್ನುವುದಕ್ಕೆ ಸಮನಾರ್ಥಕವಾಗಿ ಕಂಡರೂ ಅದು ಗಂಡಸರನ್ನು ಮಾತ್ರ ಪ್ರತಿನಿಧಿಸುವುದಿಲ್ಲ, ಹೆಣ್ಣಿಗೂ ಅನ್ವಯಿಸುತ್ತದೆ.
ಹೆಣ್ಣಿನ ’ಹೈ ಪಿಚ್’ ಗಾಯನಕ್ಕೆ ಗಂಡು ಸರಿಸಾಟಿಯಾಗಲಾರ !. ಪುರುಷತ್ವ ಎಂದರೆ, ಧೈರ್ಯ, ಆತ್ಮಸ್ಥೈರ್ಯ, ಮನೋಬಲ ಮುಂತಾದ ಧನಾತ್ಮಕ ಅಂಶಗಳ ಸಂಕೇತ. ಇಂತಹ ಅಂಶಗಳನ್ನು ಮೈಗೂಡಿಸಿಕೊಂಡು ಬೆಳೆಯುವ ಮಾನವ ಜೀವಿಯು ಪುರುಷತ್ವ( masculine dimesion) ವನ್ನು ಪಡೆಯುತ್ತಾನೆ.
’ವಿಪ್ರ’ನಾಗಿರುವುದು ಇನ್ನೂ ಮಿಗಿಲಾದುದು ಎಂದು ಹೇಳಲಾಗಿದೆ. ವಿಪ್ರನೆಂದರೆ ಬ್ರಾಹ್ಮಣ ಎಂದು ಅರ್ಥವಿದೆ. ಹಾಗಾದರೆ ಜಾತೀಯ ಬ್ರಾಹ್ಮಣರು ಮಾತ್ರ ಶ್ರೇಷ್ಠರೆ ? ಉಳಿದವರು ಅಧಮರೆ ?. ಜಾತಿಯಿಂದ ಯಾರೂ ಬ್ರಾಹ್ಮಣ ರಾಗಲಾರರು ಎಂದು ವೇದಾಂತವೇ ಹೇಳುತ್ತದೆ. ಬ್ರಹ್ಮಜ್ಞಾನವನ್ನು ಅರಿತವನೇ ಬ್ರಾಹ್ಮಣ ಎಂದು ಶ್ರುತಿಗಳು ಸಾರಿವೆ. ವ್ಯಾಪಾರಿಗಳಿಗೆ, ರಾಜರುಗಳಿಗೆ ಬ್ರಹ್ಮಜ್ಞಾನದ ಜಿಜ್ಞಾಸೆಗೆ ಚಿಂತನೆಗೆ ಕಾಲಾವಕಾಶಗಳು ಕಡಿಮೆ ಇರುತ್ತಿದ್ದರಿಂದ ಮತ್ತು ಅವರ ಮನಸು ಹೊಯ್ದಾಟಗಳಿದ ಕೂಡಿರುವುದರಿಂದ ಅವರನ್ನು ವಿಪ್ರ ಅಥವಾ ಬ್ರಾಹ್ಮಣ ಎಂದು ಕರೆಯಲಾಗದು ಎಂಬ ಅಭಿಪ್ರಾಯವು ವ್ಯಕ್ತವಾಗುತ್ತದೆ. ಯಾರ್ಯಾರು ಬ್ರಹ್ಮನನ್ನು ಅರಿಯುವರೋ ಅವರೆಲ್ಲರೂ ವಿಪ್ರರೆ. ಜ್ಞಾನಮಾರ್ಗದಲ್ಲಿ ಎಲ್ಲರೂ ನಡೆಯಬಹುದು ಆದರೆ ಕರ್ಮಮಾರ್ಗದಲ್ಲಿ ನಡೆಯಲು ಕೆಲವರಿಗೆ ಮಾತ್ರ ಸಾಧ್ಯ. ವೈದ್ಯಶಾಸ್ತ್ರವನ್ನು ಎಲ್ಲರೂ ಓದಿ ತಿಳಿದುಕೊಳ್ಳಬಹುದು ಆದರೆ ಶಾಸ್ತ್ರದ ಪ್ರಯೋಗ ಮಾಡಲು ವೈದ್ಯಶಾಸ್ತ್ರದ ವಿದ್ಯಾರ್ಥಿಗಳು ಅಥವಾ ನುರಿತ ವೈದ್ಯರು ಮಾತ್ರ ಅರ್ಹರಾಗುತ್ತಾರೆ.
ಬ್ರಹ್ಮಜ್ಞಾನವನ್ನು ಪಡೆದವನು ಒಳ್ಳೆಯ ದಾರಿಯಲ್ಲಿ ನಡೆಯಬೇಕಾಗುತ್ತದೆ. ಒಳ್ಳೆಯ ಆಲೋಚನೆಗಳನ್ನು ಇಟ್ಟುಕೊಂಡು ಸಮಾಜಕ್ಕೆ ಧರ್ಮಾಧರ್ಮಗಳ ವಿಚಾರಗಳನ್ನು ವಿವರಿಸಬೇಕಾಗುತ್ತದೆ. ವೈದಿಕ ಧರ್ಮಮಾರ್ಗವೆಂದರೆ ಶಾಸ್ತ್ರಗಳನ್ನು ಗೌರವಿಸಿ ಅದರಂತೆ ನಡೆಯುವುದು ಎಂದು ಅರ್ಥ. ಧರ್ಮಶಾಸ್ತ್ರಗಳು ಸಾಮಾನ್ಯರಿಗೆ (ordinary ) ವಿಷಯಾಸಕ್ತರಿಗೆ ಇರುವಂತಹುದಾಗಿದ್ದು ಅಸಾಮಾನ್ಯರಿಗೆ(extrordinary) ,ಅಸಾಧಾರಣರಿಗೆ ಯಾವ ಶಾಸ್ತ್ರಗಳೂ ಇಲ್ಲ !.
ಸಮಾಜಕ್ಕೆ ಒಳಿತಾಗುವಂತಹ ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿಯಿಟ್ಟುಕೊಂಡು ಧರ್ಮಾಧರ್ಮಗಳ ವಿವೇಚನೆಯಿಟ್ಟುಕೊಂಡು ಜ್ಞಾನಮಾರ್ಗದಲ್ಲಿ ನಡೆಯುವುದು ಬ್ರಹ್ಮಜ್ಞಾನಿಯಾದವನ ಕರ್ತವ್ಯವಾಗಿರುತ್ತದೆ. ಕೇವಲ ಹುಟ್ಟಿನಿಂದ ಬ್ರಾಹ್ಮಣ, ಕ್ಷತ್ರಿಯ ಎಂದು ಮುಂತಾಗಿ ಕರೆಯಿಸಿಕೊಳ್ಳುವುದು ಶಾಸ್ತ್ರಸಮ್ಮತವಲ್ಲ, ಧರ್ಮಶಾಸ್ತ್ರಗಳ ಅನುಷ್ಠಾನದಿಂದ ಮಾತ್ರವೇ ವಿಪ್ರತ್ವವನ್ನು ಪಡೆಯಲು ಸಾಧ್ಯ ಎಂದು ಹೇಳಲಾಗಿದೆ. ಅಂತಹ ಜ್ಞಾನವನ್ನು ಪಡೆಯಲು ಮಾನವನು ವೈದಿಕ ಧರ್ಮಮಾರ್ಗದಲ್ಲಿ ನಡೆಯಬೇಕಾಗುತ್ತದೆ ಮತ್ತು ಅಂತಹ ಜ್ಞಾನಿಯು ಎಲ್ಲರಿಗೂ ಮಿಗಿಲಾದವನು ಎಂದು ಹೇಳಲಾಗಿದೆ. ಶಾಸ್ತ್ರಗಳನ್ನು ಯಾರೋ ಒಬ್ಬನನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗಿಲ್ಲ, ಎಲ್ಲರಿಗೂ ಅನ್ವಯವಾಗುವಂತೆ ಸಾಮಾನ್ಯ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹೇಳಲಾಗಿದೆ. ಜ್ಞಾನಿಗಳು ಅದನ್ನು ತಮಗೆ ಬೇಕಾದಂತೆ ಸರಿಯಾಗಿ ಬಳಸಿಕೊಳ್ಳತ್ತಾರೆ. ಅನಾಸಕ್ತರಿಗೆ ಯಾವ ಶಾಸ್ತ್ರಗಳೂ ಇಲ್ಲ .
ಆತ್ಮ ಮತ್ತು ಅನಾತ್ಮಗಳ ವಿವೇಚನೆಯುಳ್ಳವನು ಇನ್ನೂ ದೊಡ್ದವನೆಂದು ಹೇಳಲಾಗಿದೆ. ಅಳಿವು ಮತ್ತು ಉಳಿವಿನ ಸೂಕ್ಷ್ಮ ಜ್ಞಾನವನ್ನಿಟ್ಟುಕೊಂಡು ಶಾಶ್ವತವಾದ ಆತ್ಮನನ್ನು ಯಾರು ಅರಿಯುತ್ತಾರೋ ಅವರು ಬ್ರಹ್ಮಜ್ಞಾನಿಗಳೆಂದು ತಿಳಿಯಲಾಗಿದೆ. ಅಳಿದುಹೋಗುವ ದೇಹದ ಚಿಂತೆಯನ್ನು ಬಿಟ್ಟು ಸದಾಕಾಲ ಉಳಿಯುವ ಆತ್ಮನನ್ನು ಯಾರು ತನ್ನ ಸ್ವಂತ ಅನುಭವದಿಂದ , ಧ್ಯಾನದಿಂದ ಯೋಗಗಳಿಂದ ತಿಳಿಯುವರೋ ಮತ್ತು ಅಂತಹ ಸ್ವಾನುಭೂತಿಯಿಂದ ಸೃಷ್ಟಿಯಲ್ಲಿ ತಮ್ಮನ್ನು ತಾವು ಸ್ಥಿರವಾಗಿ ನೆಲೆಗೊಳ್ಳುವಂತೆ ಮಾಡಿಕೊಳ್ಳವರೋ ಅವರು ಎಲ್ಲರಿಗಿಂತಲೂ, ಎಲ್ಲದಕ್ಕಿಂತಲೂ ಮಿಗಿಲಾದವರು ಎಂದು ಹೇಳಲಾಗಿದೆ. ಮಾನವನಿಗೆ ಒಳಿತು-ಕೆಡುಕುಗಳನ್ನು ವಿವೇಚಿಸುವ ವ್ಯವಧಾನವಿರಬೇಕು ಮತ್ತು ಸ್ವಂತ ಬುದ್ಧಿಯಿಂದ ಶಾಶ್ವತ-ಕ್ಷಣಿಕವಾದುವುಗಳ ಬಗ್ಗೆ ಅರಿಯುವ , ಅದರಂತೆ ಒಳ್ಳೆಯ ದಾರಿಯಲ್ಲಿ ನಡೆಯುವ ವಿವೇಕವಿರಬೇಕು.
ಇವೆಲ್ಲವೂ ಸುಮ್ಮನೆ ಸಿಗುವಂತಹುದಲ್ಲ ಮತ್ತು ಇವುಗಳೆಲ್ಲವೂ ದೊರಕಿ ಮುಕ್ತಿ ಪಡೆಯುವುದು ಅಷ್ಟು ಸುಲಭವಲ್ಲ. ಅದಕ್ಕೆ ನೂರು ಕೋಟಿ ಜನ್ಮಗಳ ಪುಣ್ಯಫಲವಿರಬೇಕು ಎನ್ನಲಾಗಿದೆ. ಅಂತಹ ಪುಣ್ಯಾಂಶವಿಲ್ಲದೆ ಮೇಲಿನ ಯಾವ ಜ್ಞಾನವೂ ದೊರಕುವಿದಿಲ್ಲ ಮತ್ತು ಮುಕ್ತನಾಗಲೂ ಸಾಧ್ಯವಿಲ್ಲ ಎಂದು ಹೇಳಲಾಗಿದೆ.
ಶ್ರೀ ಶಂಕರಾಚಾರ್ಯರ ಹಲವು ಪ್ರಕರಣ ಗ್ರಂಥಗಳಲ್ಲಿ ವಿವೇಕ ಚೂಡಮಣಿಯು ಅತ್ಯಂತ ವಿಶಿಷ್ಟವಾದುದಾಗಿದೆ. ಆರಂಭದಿಂದ ಅಂತ್ಯದವರೆವಿಗೂ ಎಲ್ಲಿಯೂ ದಿಕ್ಕು ತಪ್ಪದೆ ವೇದೋಪನಿಷತ್ತುಗಳ ಸಾರವನ್ನು ತುಂಬಾ ಸರಳವಾದ ಭಾಷೆಯಲ್ಲಿ ತಿಳಿಸುತ್ತಾ ನಿರ್ದಿಷ್ಟವಾದ ಗುರಿಯನ್ನು ಮುಟ್ಟುತ್ತದೆ. ರಾಜಕಾರಣಿಗಳ ಭಾಷಣದಂತೆ ಎಲ್ಲೋ ಆರಂಭವಾಗಿ ಮತ್ತೆಲ್ಲೋ ಮುಗಿಯುವಂತಾಗದೆ, ಆತ್ಮ ಸಂಸ್ಕಾರದ ಅರಿವಿನಿಂದ ಆರಂಭವಾಗಿ ಮುಕ್ತಿಯೆಡೆಗೆ ಸಾಗುವ ದಾರಿಯ ವಿಚಾರಗಳು ಆಸಕ್ತರನ್ನು ಸಲೀಸಾಗಿ ಓದುವಂತೆ ಹಿಡಿದಿಡುತ್ತದೆ. ಇಂತಹ ಗ್ರಂಥಗಳ ವಿಚಾರಗಳನ್ನು ತಿಳಿಯುವುದು ಮತ್ತು ಅದನ್ನು ವರ್ತಮಾನಕ್ಕೆ ಅನ್ವಯವಾಗುವಂತೆ ವಿವರಿಸುವುದು ತುಸು ಕಷ್ಟವಾದರೂ, ವಿವೇಕ ಚೂಡಾಮಣಿಯಲ್ಲಿ ಬಳಸಿರುವ ಭಾಷೆಯ ಲಾಲಿತ್ಯ, ವಿಚಾರಗಳು ಎಲ್ಲಾ ಕಾಲಕ್ಕೂ ಪ್ರಸ್ತುತವಾಗುವಂತಯೇ ಇದೆ. ಈಗಾಗಲೇ ಚೂಡಾಮಣಿಯ ಕನ್ನಡದ ವಿವರಣೆಗಳಿರುವ ಹಲವು ಪುಸ್ತಕಗಳು ಹೊರಬಂದಿದ್ದು, ಅದರಲ್ಲಿ ಪ್ರಮುಖವಾಗಿ ಶ್ರೀ ಚಂದ್ರಶೇಖರ ಭಾರತಿಗಳ ವ್ಯಾಖ್ಯಾನವನ್ನು ನನ್ನ ಅಧ್ಯಯನಕ್ಕೆ ಇಟ್ಟುಕೊಂಡಿದ್ದೇನೆ. ಇಲ್ಲಿ ಬರುವ ವಿಚಾರಗಳು ಮತ್ತೆಲ್ಲೋ ಬಂದಿರಲೂ ಬಹುದು ಅಥವಾ ಬಂದಿಲ್ಲದೇ ಇರಬಹುದು, ಸಾಧ್ಯವಾದಷ್ಟು ಅಧ್ಯಯನಪರವಾದ ಹೊಸ ವಿಚಾರಗಳನ್ನು ಬರೆಯಲು ಯತ್ನಿಸುತ್ತೇನೆ. ಸರಳ ಸಂಸ್ಕೃತ ಭಾಷೆಯಲ್ಲಿ ಸುಮಾರು ೫೮೧ ಸೂಕ್ತಿಗಳೊಂದಿಗೆ ಹಲವು ಅಲಂಕಾರಗಳನ್ನು ಬಳಸಿ ರಚಿತವಾಗಿರುವ ಈ ಗ್ರಂಥವು ಕೇವಲ ಪಾವಿತ್ರ್ಯತೆಗಾಗಿಯಾಗಲೀ ಅಥವಾ ಜಗದ್ಗುರುಗಳಿಂದ ಹೇಳಲ್ಪಟ್ಟಿದೆ ಎಂದಾಗಲೀ ಮಹತ್ವವನ್ನು ಪಡೆಯದೆ , ಬದುಕಿನ ಅನೇಕ ಗೊಂದಲಗಳನ್ನು ನಿವಾರಿಸಿ ಮನಸಿಗೆ ನೆಮ್ಮದಿಯನ್ನೂ ವಿವೇಕವನ್ನೂ ತಂದುಕೊಡುವ ಗ್ರಂಥವಾಗಿದೆ. ಆಧುನಿಕ ಜಗತ್ತಿನ ವಿಜ್ಞಾನ-ತಂತ್ರಜ್ಞಾನ ಶಾಸ್ತ್ರಗಳಲ್ಲಿ ಹೇಳಲ್ಪಡುತ್ತಿರುವ ವಿಚಾರಗಳು ನಮ್ಮ ಭಾರತೀಯ ಬೇರಿನದೇ ಆದ ಉಪನಿಷತ್ಸಾರಗಳಲ್ಲಿ ಹೇಗೆ ಸೂಕ್ಷ್ಮವಾಗಿ ಅಡಕವಾಗಿದೆ ಎಂಬುದನ್ನು ಈ ಗ್ರಂಥದ ಅಧ್ಯಯನದ ಮೂಲಕ ತಿಳಿಯಬಹುದಾಗಿದೆ.
दुर्लभं त्रयमेवैतद् दैवानुग्रहहेतुकम्।
मनुष्यत्वं मुमुक्षुत्वम् महापुरुषसंश्र्यः ॥३||
ಈ ಲೋಕದಲ್ಲಿ ಸುಲಭವಾಗಿ ದೊರಕದ (ದುರ್ಲಭವಾದ) ವಿಷಯಗಳನ್ನು ತಿಳಿಸುತ್ತಾ ಶ್ರೀ ಶಂಕರರು ಇನ್ನೂ ಮಹತ್ತರವಾದ ವಿಚಾರವನ್ನು ಪ್ರಸ್ತಾವಿಸುತ್ತಾರೆ.
ಮೇಲಿನ ಶ್ಲೋಕದ ಮೊದಲನೆಯ ಸಾಲನ್ನು ಗಮನಿಸೋಣ
ದುರ್ಲಭಂ ತ್ರಯಮೈವತದ್ ದೈವಾನುಗ್ರಹ ಹೇತುಕಮ್
(ದುರ್ಲಭಂ =ಸುಲಭವಾಗಿ ದೊರಕದ, ತ್ರಯಮ್ =ಮೂರು, ದೈವಾನುಗ್ರಹ ಹೇತುಕಮ್ = ದೈವಾನುಗ್ರಹವೇ ಕಾರಣವಾಗಿರುವ )
ದೈವಾನುಗ್ರಹವೇ ಕಾರಣವಾಗಿರುವ ಮೂರು ಮುಖ್ಯ ದುರ್ಲಭವಾದ ಸಂಗತಿಗಳಿವೆ . ಆ ಸಂಗತಿಗಳನ್ನು ಶ್ಲೋಕದ ಎರಡನೆಯ ಸಾಲಿನಲ್ಲಿ ಹೇಳಲಾಗಿದೆ. ಆ ಎರಡನೆಯ ಸಾಲಿನ ಮೊದಲನೆಯ ಸಂಗತಿಯನ್ನು ಗಮನಿಸೋಣ.
೧) ಮನುಷ್ಯತ್ವಮ್ (= ಮನುಜನಾಗಿರುವುದು)
ಮಾನವ ಜೀವಿಯು ‘ಮನುಷ್ಯ’ ಎನಿಸಿಕೊಳ್ಳಲು ಆತನಿಗಿರಬೇಕಾದ ಕನಿಷ್ಠ ಅರ್ಹತೆಯೆಂದರೆ ಅದು ಮನುಷ್ಯತ್ವ !. ಕಾಡು ಪ್ರಾಣಿಗಳ ಗುಣವು ನಾಗರೀಕ ಮಾನವನ ಗುಣವಲ್ಲ. ಈ ಮೊದಲು ಹೇಳಿದಂತೆ ಮಾನವನಿಗೆ ಹೆಚ್ಚಿನ ಗುಣಗಳು ಸಂದಾಯವಾಗಿ ಬಂದಿದ್ದರೆ ಕೆಲವೊಂದನ್ನು ಸಂಪಾದಿಸಿಕೊಳ್ಳಬೇಕಾಗುತ್ತದೆ. ಗುಣ ಸಂಪಾದನೆಗೆ ಸ್ವಾನುಭವವೂ ದಾರಿಯಾಗಬಲ್ಲುದು ವೇದಾಂತಗಳ ಅರಿವೂ ಬೆಳಕಾಗಬಲ್ಲುದು. ಸಂವೇದನಾಶೀಲತೆಯೇ ಮನುಷ್ಯತ್ವದ ಮುಖ್ಯ ಲಕ್ಷಣ ಎನ್ನಬಹುದು. ಸಂವೇದನೆ (ನೋವು-ನಲಿವು ಮುಂತಾದವು )ಗಳಿಗೆ ಮನಸ್ಸು-ಬುದ್ಧಿಯನ್ನು ಬಲಿಗೊಡದೆ ಸ್ಥಿತಪ್ರಜ್ಞರಂತೆ ಇರಬೇಕೆಂದು ’ಗೀತೆ’ಯಲ್ಲಿ ಹೇಳಿದ್ದರೂ ಹಾಗೆ ಹೇಳಿರುವ ಸಂದರ್ಭ ಮತ್ತು ಉದ್ದೇಶವನ್ನು ನಾವು ಗಮನದಲ್ಲಿಡಬೇಕಾಗುತ್ತದೆ. ಸೂಕ್ಷ್ಮ ಸಂವೇದನೆಗಳಿಲ್ಲದ ಮಾನವನಲ್ಲಿ ಮನುಷ್ಯತ್ವವನ್ನು ಕಾಣಲು ಸಾಧ್ಯವೆ ?. ನಮ್ಮ ಸುತ್ತಲಿನ ಪರಿಸರದ ಮತ್ತು ನಮ್ಮೊಡನೆ ಜೀವಿಸುವ ಜೀವಿಗಳ ಆಗು-ಹೋಗುಗಳ ವಿಷಯದಲ್ಲಿ ಆಸಕ್ತರಾಗಿರುವುದು, ನೋವು-ನಲಿವುಗಳಲ್ಲಿ ಭಾಗಿಯಾಗುವುದು ಮನುಷ್ಯತ್ವದ ಪ್ರತೀಕ. ಮನುಷ್ಯರಾದ ನಾವು ಮನುಷ್ಯತ್ವವನ್ನು ಸ್ವಾನುಭವದಿಂದಲ್ಲದೆ ಕೇವಲ ಉಪದೇಶಗಳನ್ನು ಕೇಳುವುದರಿಂದಲೇ ಕಂಡುಕೊಳ್ಳಲೆತ್ನಿಸುವುದು ಕಡ್ಡತನವೇ ಸರಿ !. ಗ್ರಂಥದ ಆರಂಭದ ಶ್ಲೋಕದಲ್ಲೇ “ಸ್ವನುಭವೋ” ( ಸು = ಚೆನ್ನಾದ, ಒಳ್ಳೆಯ, ಅನುಭವಃ = ಸಾಕ್ಷಾತ್ಕಾರ, ತಿಳುವಳಿಕೆ) ಎಂದು ಹೇಳಿ ಅದಕ್ಕೆ ಮಹತ್ವವನ್ನು ನೀಡಲಾಗಿದೆ. ಧ್ಯಾನ (ವಿದ್ಯೆ) ಮತ್ತು ಯೋಗಗಳ ಸಹಾಯದಿಂದ (ಆಚರಣೆಯಿಂದ) ಮನುಷ್ಯತ್ವದ ತಿಳುವಳಿಕೆಯನ್ನು ಪಡೆಯುವ ಮಾರ್ಗವೇ ಉತ್ತಮವೆಂದು ಹೇಳಲಾಗಿದೆ.
೨) ಮುಮುಕ್ಷುತ್ವಮ್ ( = ಮೋಕ್ಷದ ಅಪೇಕ್ಷೆ, ಬಿಡುಗಡೆಯ ಬಯಕೆ )
ಪ್ರಾಪಂಚಿಕ ಸುಖಗಳನ್ನೆಲ್ಲಾ ತೊರೆದು ವೈರಾಗ್ಯವನ್ನು ತಾಳಿದರೆ ಮಾತ್ರ ಮೋಕ್ಷ ದೊರಕುವುದೆಂದಾದರೆ ವಿಶಿಷ್ಟತೆ-ವಿಚಿತ್ರಗಳಿಂದ ಕೂಡಿರುವ ಈ ಲೋಕದಲ್ಲಿ ಹುಟ್ಟುವುದಾದರೂ ಏಕೆ ?! . ಹುಟ್ಟು-ಸಾವುಗಳೆರಡೂ ಸಾಮಾನ್ಯ ಮನುಜನ ಅಂಕೆಯಲ್ಲಿ ಇಲ್ಲದಿರುವುದರಿಂದ ಮೇಲಿನ ಪ್ರಶ್ನೆಗೆ ಸಾಮಾನ್ಯ ಸ್ತರದಲ್ಲಿ ಉತ್ತರ ದೊರಕುವುದಿಲ್ಲ !.
ಈ ಲೋಕದ ವ್ಯವಹಾರಗಳಲ್ಲಿ ನಾವು ತೊಡಗಿಕೊಂಡಾಗ ಪರಸ್ಪರ ಸಹಕಾರ ಸಂವೇದನೆಗಳು ಏರ್ಪಡುವುದು ಸಹಜ. ಉದಾಹರಣೆಗೆ ;
ನಮ್ಮ ಮನೆಯ ಮುದ್ದಿನ ನಾಯಿಗೆ ಕಾಯಿಲೆಯಾದರೆ ಅದರ ಮೇಲಿನ ವಾತ್ಸಲ್ಯದಿಂದ ಔಷಧಿಗಳನ್ನು ಕೊಟ್ಟು ಉಪಚರಿಸಿ ಚೇತರಿಸಿಕೊಳ್ಳುವಂತೆ ಮಾಡುತ್ತೇವೆ ( ಇದು ಮನುಷ್ಯತ್ವ). ನಾಯಿಗೆ ಕಾಯಿಲೆ ಬಂದಾಗ ಬಾಡುವ ಮನಸ್ಸು, ನಾಯಿಯು ಚೇತರಿಸಿಕೊಂಡು ಪ್ರೀತಿಯಿಂದ ಬಾಲವನ್ನು ಆಡಿಸಿದಾಗ ಅರಳುತ್ತದೆ. ನಮ್ಮ ಔಷಧೋಪಚಾರಕ್ಕೆ ಬೆಲೆ ಬರುತ್ತದೆ. ಮನಸ್ಸಿಗೆ ನೆಮ್ಮದಿ ದೊರೆತು ಆತಂಕದಿಂದ ’ಮುಕ್ತಿ’ ಸಿಗುತ್ತದೆ. ಇಂತಹ ಸಣ್ಣ ಸಣ್ಣ ’ಮುಕ್ತಿ’ಗಳೇ ಸಮಷ್ಟಿಯಲ್ಲಿ (ಒಟ್ಟಾರೆ) ಮೋಕ್ಷದ ದಾರಿಯೆಡೆಗೆ ನಮ್ಮನ್ನು ಕೊಂಡೊಯ್ಯುತ್ತದೆ. ನಮ್ಮ ಕರ್ತವ್ಯ, ಕರ್ಮಗಳನ್ನು ಪ್ರಾಮಾಣಿಕವಾಗಿ ಮಾಡಿ ಮುಗಿಸಿದ ನಂತರ ದೊರೆಯುವ ನೆಮ್ಮದಿ ಮತ್ತು ಬಿಡುಗಡೆಯ ಆನಂದವನ್ನು ನಾವು ಅನುಭವಿಸಿಯೇ ಅರಿತಿರುತ್ತೇವೆ. ಕರ್ಮದ ದಾರಿಯಲ್ಲಿ ಇಂತಹ ಬಿಡುಗಡೆಯನ್ನು ಪಡೆಯುತ್ತಾ ಹೋದಂತೆ ಜ್ಞಾನವೂ ವರ್ಧಿಸುತ್ತಾ ಹೋಗುತ್ತದೆ. ಜ್ಞಾನ ಮಾರ್ಗದಿಂದ ಪಡೆಯುವ ನೆಮ್ಮದಿ ಅಥವಾ ಮೋಕ್ಷವು (ಬ್ರಹ್ಮ ಜ್ಞಾನವು) ಕರ್ಮಮಾರ್ಗದಿಂದ ಪಡೆದಿದುಕ್ಕಿಂತಲೂ ಮಿಗಿಲಾದುದಾಗಿರುತ್ತದೆ. ಪ್ರಾಪಂಚಿಕ ಸುಖಗಳಲ್ಲಿ ತೊಡಗಿಕೊಂಡ ನಂತರ ಆಯಾ ಕರ್ಮಗಳನ್ನು ಪ್ರಾಮಾಣಿಕವಾಗಿ ಮುಗಿಸಿ ನಿರಾಳತೆಯನ್ನು ಹೊಂದಿದರೆ ಕರ್ಮದಿಂದ ಮುಕ್ತರಾಗಬಹುದು ಆದರೆ ಕರ್ಮಮುಕ್ತಿಯು ಯೋಗ್ಯವಲ್ಲದ್ದು ( ಹಲವು ಬಾರಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಕೊನೆಗೊಮ್ಮೆ ಪೂರಕ ಪರೀಕ್ಷೆಯಲ್ಲಿ ಸಾರಾ ಸಗಟು ೩೫ ಅಂಕಗಳನ್ನು ನೀಡಿ ಪಾಸು ಮಾಡಿದಂತೆ !) ಎನ್ನುವ ಅಭಿಪ್ರಾಯವಿರುವುದರಿಂದ ಜ್ಞಾನದಿಂದಲೇ ಮುಮುಕ್ಷುತ್ವವನ್ನು ಪಡೆಯುವುದು ಉತ್ತಮ ಎಂದು ಹೇಳಲಾಗಿದೆ. ಹಾಗಾದರೆ ಕರ್ಮ(ಕರ್ತವ್ಯ)ವನ್ನು ಮಾಡದೆ ನೇರವಾಗಿ ಜ್ಞಾನ ಸಂಪಾದನೆಯನ್ನೇ ಮಾಡಬಹುದಲ್ಲಾ ಎಂದುಕೊಂಡರೆ ಅದೂ ತಪ್ಪಾಗುತ್ತದೆ !. ಕರ್ಮವನ್ನು ಮಾಡುವುದರಿಂದ ಮಾತ್ರ ಅದರ ಬಂಧನದಿಂದ ಬಿಡುಗಡೆ ಹೊಂದಬಹುದೇ ಹೊರತು ಮಾಡದೇ ಇರುವುದರಿಂದಲ್ಲ ( ಬ್ಲಾಗ್ ಪೋಸ್ಟನ್ನು ಬರೆಯುವುದರಿಂದ ಮಾತ್ರವೇ ಆ ಚಟದಿಂದ ಮುಕ್ತರಾಗಬಹುದೇ ಹೊರತು ಬರೆಯದೆ ಸುಮ್ಮನಿರುವುದರಿಂದಲ್ಲ ! ). ಉಪದೇಶಗಳನ್ನು ಕೇಳುವುದರಿಂದ, ಕೇಳಿದ್ದನ್ನು ಮನನ ಮಾಡುವುದರಿಂದ ಬರುವ ಅನುಭವವು ಉನ್ನತ ಮಟ್ಟದ್ದಾಗಿರುವುದಿಲ್ಲ, *ಜ್ಞಾನಭೂಮಿಕೆ*ಗಳಿಂದ ಪಡೆಯುವ ಅನುಭವವು ಮುಮುಕ್ಷುತ್ವಕ್ಕೆ ದಾರಿ ಮಾಡಿಕೊಡುತ್ತದೆ.
ಒಬ್ಬಾತನು ರಾಮಕೃಷ್ಣ ಪರಮಹಂಸರ ಬಳಿಗೆ ತೆರಳಿ “ಮುಮುಕ್ಷುತ್ವ” ಎಂದರೇನು ಎಂದು ಕೇಳಿದನಂತೆ. ಅವರು ವಿವರಣೆ ಕೊಡುವ ಬದಲು ಆತನನ್ನು ಗಂಗಾನದಿಯ ಬಳಿಗೆ ಕರೆದೊಯ್ದು ನದಿಯೊಳಗೆ ನಿಲ್ಲಿಸಿ ಆತನ ಕತ್ತನ್ನು ನೀರಿನೊಳಗೆ ಅದುಮಿ ಹಿಡಿದರಂತೆ. ಆ ಮನುಷ್ಯನು ತನ್ನೆಲ್ಲಾ ಶಕ್ತಿಯನ್ನು ಬಳಸಿ ತಲೆಯನ್ನು ನೀರಿನಿಂದ ಮೇಲೆತ್ತಿದನಂತೆ. “ಯಾಕಯ್ಯ” ಎಂದು ಪರಮಹಂಸರು ಕೇಳಿದರೆ ” ಉಸಿರೇ ನಿಂತು ಹೊಗುತ್ತಿತ್ತು” ಎಂದನಂತೆ ಆ ಮನುಷ್ಯ.
“ಇಂತಹ ತೀವ್ರತೆಯೇ ಮುಮುಕ್ಷುತ್ವಕ್ಕೆ ದಾರಿ” ಎಂದರಂತೆ ಪರಮಹಂಸರು !.
೩) ಮಹಾಪುರುಷ ಸಂಶ್ರಯಃ (= ಮಹಾಪುರುಷರ, ಸಜ್ಜನರ ಸಹವಾಸ ಪಡೆಯುವುದು)
’ಸಹವಾಸದಿಂದ ಸನ್ಯಾಸಿ ಕೆಟ್ಟ’ ಎಂಬ ಮಾತನ್ನು ಕೇಳಿರುತ್ತೇವೆ. ವೇದಾಂತಿಗಳಾದ ಮಂಡನಮಿಶ್ರರ ಮನೆಯಲ್ಲಿ ಗಿಳಿಗಳೂ ಸಹ ವೇದಾಂತಗಳ ಬಗ್ಗೆ ತರ್ಕವನ್ನು ಮಾಡುತ್ತಿದ್ದುವಂತೆ !. “ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ” ಎಂಬ ಸರ್ವಜ್ಞನ ವಚನವನ್ನು ಓದಿರುತ್ತೇವೆ. ವಿಚಾರಗಳ ತಿಳಿವು ಪಡೆಯಲು ಅರಿತವರೊಂದಿಗೆ, ಮಹಾಪುರುಷರೊಂದಿಗೆ ತರ್ಕಮಾಡಬೇಕೆಂದೇನೂ ಇಲ್ಲ, ಅಂತಹ ಮಹನೀಯರ ನಡುವಿನ ಸಂಭಾಷಣೆಯನ್ನು ಮೌನವಾಗಿ ಕೇಳಿಸಿಕೊಳ್ಳುವುದರಿಂದಲೇ ಹೆಚ್ಚಿನ ತಿಳಿವನ್ನು ಪಡೆಯಬಹುದು. ಜ್ಞಾನಿಗಳ ಹರಟೆಯ ವಿಷಯಗಳೇ ಆಸಕ್ತರಿಗೆ ಮಹತ್ವವಾಗಿ ಪರಿಣಮಿಸಬಲ್ಲುದು. ಚಾಣಕ್ಯನೆಂಬ ಮಹಾಪುರುಷನ ಸಹವಾಸಕ್ಕೆ ಸಿಲುಕಿದ ಚಂದ್ರಗುಪ್ತನೆಂಬ ಬಾಲಕ ಮುಂದೆ ಮೌರ್ಯ ವಂಶದ ದೊರೆಯಾದದ್ದು ಇತಿಹಾಸ. ಮಾನಸಿಕ ಒತ್ತಡಕ್ಕೆ ಸಿಲುಕಿದಾಗ ಮನೋವಿಜ್ಞಾನಿಗಳ ಬಳಿಗೆ ತೆರಳಿ ಸಲಹೆ ಪಡೆಯುವುದು ಇಂದಿನ ದಿನಗಳಲ್ಲಿ ವಾಡಿಕೆಯೇ ಆಗಿದೆ. ಅಲ್ಲಿ ಪಡೆಯಬಹುದಾದ ಸಲಹೆಯ ಬಹುಪಾಲು ಅಂಶಗಳು ನಮ್ಮ ಸಂಸ್ಕೃತಿಯ ವೇದೋಪನಿಷತ್ತುಗಳಲ್ಲಿಯೇ ಅಡಗಿದೆ ಎನ್ನುವುದನ್ನು ನಮ್ಮವರೇ (ಜಾಣ) ಮರೆತಿರುವುದು ವಿಪರ‍್ಯಾಸ !. ಇಂತಹ ಜ್ಞಾನ ದೀವಿಗೆಯನ್ನು ನಮಗಿತ್ತು ಆ ಬೆಳಕಿನಲ್ಲಿ ಅನವರತ ಸಾಗಿರಿ ಎಂದಂತಹ ಮಹಾಪುರುಷರ ಸಹವಾಸ ಇಂದು ಅಗತ್ಯವಾದುದಾಗಿದೆ. ಇಂತಹ ದುರ್ಲಭವಾದ ಸಹವಾಸವನ್ನು ಪಡೆಯುವುದು ಜ್ಞಾನ ಮಾರ್ಗದಲ್ಲಿ ಮಾತ್ರ ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ.
|| ದೊರಕದು ಇವು ಮೂರು ದೇವನಂತಃಕರಣವಿಲ್ಲದೆ
ಮನುಜನಾಗಿರುವುದು, ಮುಕ್ತಿಯು, ಸಜ್ಜನರ ಸಂಗವು ||
लब्ध्वा कथन्चित नरजन्म दुर्लभं
तत्रापि पुंस्त्वं श्रुतिपारदर्शनम् ।
यस्त्वात्ममुक्त्यै न यतेत मूढधीः
स आत्महा स्वं विनिहन्त्यसद्ग्रहात ॥४॥
ಈ ಸೂಕ್ತಿಯು ಮೇಲಿನ ಮೂರನೆಯ ಸೂಕ್ತಿಗೆ ಪೂರಕವಾದ ಶ್ಲೋಕವಾಗಿದೆ. ಇದರ ಅರ್ಥವನ್ನು ಗಮನಿಸೋಣ.
ಸ ಆತ್ಮಹಾ ಸ್ವಂ ವಿನಿಹಂತ್ಯಸದ್ಗ್ರಹಾತ್ (= ಆತ್ಮಘಾತುಕತನ)
ಹೀಗೆ ಆಕಸ್ಮಿಕವಾಗಿ ದೊರೆತಿರುವ ದುರ್ಲಭವಾದ ಮಾನವ ಜನ್ಮವಿದ್ದು ವೇದಾಂತದ, ಆತ್ಮ ಜ್ಞಾನದ ಅರಿವಿಗೆ ಬೇಕಾದ ಪುರುಷತ್ವವೂ ಇದ್ದು ತನ್ನ ಮುಕ್ತಿಗಾಗಿ ಯತ್ನಿಸದವನು ಮೂರ್ಖನು ಮತ್ತು ಹಾಗೆ ಮಾಡುವುದು ತನ್ನನ್ನೇ ತಾನು ಹತ್ಯೆ ಮಾಡಿಕೊಂಡತಾಗುತ್ತದೆ , ಹೇಗೆಂದರೆ ಮಿಥ್ಯೆ ಎನ್ನುವ ಈ ಜಗತ್ತನ್ನೇ ನಂಬುವುದರ ಮೂಲಕ ಎಂದು ಹೇಳಲಾಗಿದೆ. (’ಜಗನ್ಮಿಥ್ಯಾ’ ಎನ್ನುವುದಕ್ಕೆ ಮುಂದಿನ ಸೂಕ್ತಿಗಳಲ್ಲಿ ಸಾಕಷ್ಟು ವಿವರಣೆಗಳು ಬರಲಿದೆ)
इतः कोन्वस्ति मूढात्मा यस्तु स्वार्थे प्रमाद्यति ।
दुर्लभं मानुषं देहं प्राप्यतत्रापि पौरुषम् ॥५॥
ಈ ಸೂಕ್ತಿಯೂ ಸಹ ಮೇಲಿನ ಎರಡು ಮತ್ತು ಮೂರನೆಯ ಶ್ಲೋಕಗಳಿಗೆ ಪೂರಕವಾಗಿ ಹೇಳಿದುದಾಗಿದೆ. ಇದರ ಅರ್ಥವನ್ನು ಗಮನಿಸೋಣ.
ಪ್ರಾಣಿಗಳಲ್ಲೇ ದುರ್ಲಭವಾದ ಮನುಷ್ಯಜನ್ಮವನ್ನು ಪಡೆದು, ಪುರುಷತ್ವವನ್ನೂ ಪಡೆದು ಧರ್ಮಮಾರ್ಗದಲ್ಲಿ ನಡೆಯುವ ಅಧಿಕಾರವನ್ನು ಪಡೆದು ಆತ್ಮಾನಾತ್ಮ ವಿವೇಚನೆಯನ್ನೂ ಪಡೆದು ಮನುಷ್ಯತ್ವ ಮುಮುಕ್ಷುತ್ವಗಳನ್ನೂ ತಿಳಿದು ಮಹಾಪುರುಷರ ಸಹವಾಸವನ್ನು ಹೊಂದಿದರೂ ಸಹ ತನ್ನ ಹಿತವನ್ನು ಕಾಪಾಡಿಕೊಳ್ಳಲಾಗದವನನ್ನು(ಕಾರ್ಯವನ್ನು ಜಯಿಸುವ ಸಾಮರ್ಥ್ಯವನ್ನು ತೋರದವನು) ಮೂಢನೆನ್ನದೆ ಏನನ್ನಬೇಕು?. ಅಂತಹವನು ಮಹಾ ಮೂರ್ಖನೇ ಸರಿ ಎಂದು ಹೇಳಲಾಗಿದೆ. ಹೀಗೆ ಐದು ಸೂಕ್ತಿಗಳಲ್ಲಿ ಮುಕ್ತಿಯ ಮಹತ್ವವನ್ನು ಶ್ರೀ ಶಂಕರರು ತಿಳಿಸಿದ್ದಾರೆ.
पठंतु शास्त्राणि यजंतु देवान्
कुर्वंतु कर्माणि भजंतु देवताः ।
आत्मैक्य बोधेन विना विमुक्ति-
र्न सिध्यति ब्रह्मशतांतरेपि ॥६॥
ಮುಕ್ತಿಯ ಮಹತ್ವವನ್ನು ತಿಳಿಸುತ್ತಾ ಶ್ರೀ ಶಂಕರರು ಮುಂದೆ ಬಹಳ ದಿಟ್ಟವಾದ ಧೀರವಾದ ಘೋಷಣೆಯನ್ನು ಮಾಡುತ್ತಾರೆ. ಮೇಲಿನ ಶ್ಲೋಕದ ವಿವರಣೆಯನ್ನು ತಿಳಿಯುವುದರ ಮೂಲಕ ಆ ಉದ್ಘೋಷವೇನು ಎಂಬುದನ್ನು ಅರಿಯೋಣ.
“ಆರು ಶಾಸ್ತ್ರವ ಓದಿದರಿಲ್ಲ ನೂರಾರು ಪುರಾಣವ ಪಠಿಸಿದರಿಲ್ಲ” ಎಂಬ ದಾಸವಾಣಿಯನ್ನು ಕೇಳಿರುತ್ತೇವೆ.ಶಾಸ್ತ್ರಗ್ರಂಥಗಳನ್ನು ಓದುವುದರಿಂದ, ದೇವತೆಗಳನ್ನು ಪೂಜಿಸುವುದರಿಂದ, ಕರ್ಮಾನುಷ್ಠಾನಗಳನ್ನು ಆಚರಿಸುವುದರಿಂದ, ದೇವತೆಗಳನ್ನು ಸ್ತುತಿಸುವುದರಿಂದ, ಇದ್ಯಾವುದರಿಂದಲೂ ಮುಕ್ತಿಯು ದೊರೆಯುವುದಿಲ್ಲ ಎಂದು ಶಂಕರರು ಹೇಳುತ್ತಾರೆ. ಹಾಗಾದರೆ ಮುಕ್ತಿಯ ದಾರಿ ಯಾವುದು ? ಈ ಚಿಂತೆ-ಕೋಟಲೆಗಳಿಂದ ಬಿಡುಗಡೆ ಎಂತು ?.
ತನ್ನೊಳಗಿನ ಸುಪ್ತ ಪ್ರಜ್ಞೆಯನ್ನು ಜಾಗೃತಗೊಳಿಸಿ ಪರಮಾರ್ಥ ಚಿಂತನೆಗೆ ಒಡ್ಡಿಕೊಳ್ಳದೆ ಇದ್ದಲ್ಲಿ ನೂರಾರು ಚತುರ್ಮುಖ ಬ್ರಹ್ಮರು ಬಂದು ಹೋದರೂ (ಅಷ್ಟು ಅವಧಿ ಕಳೆದರೂ) ಮೋಕ್ಷ ಅಥವಾ ಮುಮುಕ್ಷುತ್ವವು ದೊರಕಲಾರದು ಎಂದು ಹೇಳುತ್ತಾರೆ.
ಆತ್ಮ ಸಾಕ್ಷಾತ್ಕಾರದಿಂದ ಮಾತ್ರವೇ ನೆಮ್ಮದಿ, ಮುಕ್ತಿ ಎಂದಾದರೆ ನಾವು ದಿನವೂ ಮಾಡುವ ಪೂಜೆ, ಮಡಿ, ಸಾಂಪ್ರದಾಯಿಕ ಆಚರಣೆಗಳು, ಹವನಗಳು, ಪರೋಪಕಾರ, ದೇಶಸೇವೆ, ಪ್ರಾಮಾಣಿಕತೆ ಇದೆಲ್ಲಾ ಬಳಕೆಗೆ ಬಾರದ್ದೇ ? ವ್ಯರ್ಥವೇ ? ಇದನ್ನೆಲ್ಲಾ ಮಾಡುವುದಾದರೂ ಏಕೆ? ಎಂಬ ಪ್ರಶ್ನೆ ಏಳುವುದು ಸಹಜ.
ನಾವು ನಿತ್ಯವೂ ಆಚರಿಸುವ-ಅನುಸರಿಸುವ ಈ ಎಲ್ಲಾ ಕರ್ಮಗಳೂ ನಮ್ಮ ನಿರ್ಧಾರಗಳನ್ನು ಬಲಗೊಳಿಸುವಂತಹುದು. ನಮ್ಮಲ್ಲಿ ಸಾಮರ್ಥ್ಯವನ್ನು ತುಂಬುವಂತಹುದು. ನೆಮ್ಮದಿಯ ಅಕೌಂಟಿನಲ್ಲಿ ಜಮೆಯಾಗುವ ಡಿಪಾಸಿಟ್ಟುಗಳು !. ಹಾಗಾಗಿ ಕರ್ಮಗಳನ್ನು ಆಚರಿಸಲೇಬೇಕಾಗುತ್ತದೆ. ಕರ್ಮಗಳನ್ನು ಬಿಟ್ಟು ಬಿಡೋಣ ಎಂದರೆ, ಅವನ್ನು ಕಟ್ಟಿಕೊಂಡಿದ್ದೇವೆ ಎಂದೇ ಅರ್ಥ !. ಕರ್ಮಗಳಿಂದ ದೊರೆಯುವ ಫಲವು ಮಾತ್ರ ಗೌಣವಾದುದು. ’ಕರ್ಮವನ್ನು ಮಾಡು ಅದರ ಫಲಾಫಲಗಳನ್ನು ನನಗೆ ಬಿಡು’ ಎಂದು ಕೃಷ್ಣನು ಗೀತೆಯಲ್ಲಿ ಹೇಳಿದ್ದಾನೆ. ’ನನಗೆ ಬಿಡು’ ಎಂದರೆ ಫಲದ ಅಪೇಕ್ಷೆಯನ್ನು ಬಿಡು ಎಂದು ಅರ್ಥವೇ ಹೊರತು ಮಾಡಬಾರದ್ದನ್ನೆಲ್ಲಾ ಮಾಡಿ ಫಲಕ್ಕೆ ಮಾತ್ರ ಕೃಷ್ಣನನ್ನು ಹೊಣೆಯಾಗಿಸು ಎಂದಲ್ಲ. ಕೃಷ್ಣನು ಇಲ್ಲಿ ಜ್ಞಾನದ ಸಂಕೇತವೇ ಆಗಿದ್ದಾನೆ.
ಇಂದಿನ ನಿತ್ಯ ಜೀವನದ ಜಂಜಡದಲ್ಲಿ ಆತ್ಮಜ್ಞಾನ ಸಾಧನೆಗೆ ಸಮಯವಾದರೂ ಎಲ್ಲಿದೆ? ಕರ್ಮಗಳನ್ನಾದರೂ ಹೇಗೋ ಆಚರಿಸಬಹುದು, ಜ್ಞಾನಮಾರ್ಗಕ್ಕೆ ಅವಕಾಶವಾಗುವುದು ಕಷ್ಟವಲ್ಲವೆ ? ಕರ್ಮ-ಜ್ಞಾನಗಳ ಅ ಆ ಇ ಈ ಗಳೂ ಗೊತ್ತಿರದವರು ಆತ್ಮಜ್ಞಾನವನ್ನು ಸಾಧಿಸಲು ಸಾಧ್ಯವೆ ? ಎಂಬ ಪ್ರಶ್ನೆಗಳು ಏಳುತ್ತದೆ.
ಬಿ.ಎ. ಮುಗಿಸಿದ ನಂತರವಷ್ಟೇ ಎಂ.ಎ. ಗೆ ಹೋಗಬಹುದೇ ಹೊರತು ಒಂದನೇ ತರಗತಿಯಿಂದ ನೇರವಾಗಿ ಎಂ.ಎ. ಪಾಸು ಮಾಡಲು ಸಾಧ್ಯವಿಲ್ಲ. ಎಲ್ಲದಕ್ಕೂ ಸಾಧನೆ ಎನ್ನುವುದು ಬೇಕಾಗುತ್ತದೆ.
“ಜಟ್ಟಿ ಕಾಳಗದಿ ಸೋತೊಡೇನಾಯ್ತು
ಪಟ್ಟು ವರಸೆಗಳೆಲ್ಲಾ ವಿಫಲವೆನ್ನುವೆಯಾ?
ಮುಟ್ಟಿ ನೋಡವನ ಮೈ ಕಬ್ಬಿಣ ಗಟ್ಟಿ
ಗಟ್ಟಿತನ ಗರಡಿ ಫಲ ” ಎನ್ನುವ ವಾಕ್ಯವನ್ನು ನಾವು ಬಹುವಾಗಿ ಗಮನಿಸಬೇಕಾಗುತ್ತದೆ.
ಕೆಲವೊಂದು ವಿಷಯಗಳನ್ನು ಹೀಗೇ ಹೇಳಬೇಕಾಗುತ್ತದೆ.
’ಕೊಳೆತ ಹಣ್ಣನ್ನು ತಿನ್ನಬಾರದು ಆರೋಗ್ಯಕ್ಕೆ ಒಳ್ಳೆಯದಲ್ಲಾ’ ಎಂದರೆ ಆಗೊಮ್ಮೆ ಈಗೊಮ್ಮೆ ರುಚಿ ನೋಡುವ ಮನಸಾಗುತ್ತದೆ. ’ತಿಂದರೆ ಸತ್ತೇ ಹೋಗುತ್ತಿಯಾ’ ಎಂದಾಗ ಕೊಂಚ ಗಂಭೀರತೆ ಬರುತ್ತದೆ. ಕರ್ಮ-ಜ್ಞಾನಗಳ ವಿಚಾರವೂ ಹಾಗೆಯೇ. ನಾವು ಆಚರಿಸುವ ಯಾವ ಕರ್ಮಗಳೂ ವ್ಯರ್ಥವಾಗುವುದಿಲ್ಲ, ಅವೆಲ್ಲವೂ ಜ್ಞಾನ ಮಾರ್ಗದ ಮೆಟ್ಟಿಲುಗಳು. ಸಂಸಾರಿಗಳಿಗೆ ಲೌಕಿಕರಿಗೆ {ಪ್ರವೃತ್ತಿ ಧರ್ಮ‍(೧)} ಕರ್ಮಕ್ಕೆ ಸದಾ ಅವಕಾಶವಿದೆ, ಆದರೆ ಸನ್ಯಾಸಿಗಳಿಗೆ, ವಿರಾಗಿಗಳಿಗೆ {ನಿವೃತ್ತಿ ಧರ್ಮ(೧)} ಕರ್ಮದ ಗೊಡವೆಯೇ ಇಲ್ಲದವರಿಗೆ ಬಿಡುಗಡೆ ಹೇಗೆ ? . ಪ್ರವೃತ್ತಿ-ನಿವೃತ್ತಿ ಧರ್ಮಗಳನ್ನು ಎಷ್ಟೇ ಆಚರಿಸಿದರೂ ’ಆತ್ಮೈಕ ಜ್ಞಾನ’ ಲಭ್ಯವಾಗದೆ ಮುಮುಕ್ಷುತ್ವವಿಲ್ಲ ಎಂಬ ಧೀರವಾದ ಮಾತನ್ನು ಶ್ರೀ ಶಂಕರರು ಹೇಳುತ್ತಾರೆ.
अम्रुतत्वस्य नाशास्ति वित्तेनेत्येव हि श्रुतिः ।
ब्रवीति कर्मणो मुक्तेः अहेतुत्वं स्पुटं यतः ॥७॥
ನಾವು ಲೌಕಿಕ ಕರ್ಮಗಳನ್ನು ಅನುಸರಿಸಿದಾಗ ಅದರಿಂದ ಸಂಪತ್ತಿನ ಅಥವಾ ದ್ರವ್ಯದ ಲಾಭವು ನಮಗೆ ಬರುತ್ತದೆ. ಪರೋಪಕಾರವು ಒಳ್ಳೆಯ ಕಾರ್ಯವೇ ಆಗಿದ್ದರೂ ಅಂತಹ ಕಾರ್ಯಕ್ಕೆ ಪ್ರತಿಫಲವನ್ನು ಪಡೆದಾಗ ಆ ಕರ್ಮವು ನೆಮ್ಮದಿಯ ಮಾರ್ಗಕ್ಕೆ ಅಡಾಚಣೆಯಾಗುತ್ತದೆ. ’ಪುತ್ರ ಸಂತಾನವಿಲ್ಲದೆ ಮುಕ್ತಿಯಿಲ್ಲ’ ಎಂಬ ಮಾತೊಂದು ಅಲ್ಲಲ್ಲಿ ತೇಲಿ ಬರುತ್ತಿರುತ್ತದೆ. ಅಂತಹವರು ಶಂಕರರ ಈ ಮಾತನ್ನು ಗಮನಿಸಲೇ ಬೇಕು.
” ಶ್ರುತಿಗಳು (೨) ಹೇಳಿರುವಂತೆ ಪುತ್ರರು, ಧರ್ಮ-ಕರ್ಮಗಳು, ಉಪಾಸನೆ, ಸಂಪತ್ತು, ವಸ್ತು-ವಾಹನಗಳು, ಇವೆಲ್ಲವೂ ವಿತ್ತದ ಅಥವಾ ಧನದ ರೂಪವೇ ಆಗಿರುವುದರಿಂದ ಇವುಗಳಿಂದ ಮೋಕ್ಷದ ಆಸೆಯನ್ನು ಇಟ್ಟುಕೊಳ್ಳುವಂತಿಲ್ಲ”
ಎಂದು ಹೇಳುತ್ತಾರೆ. ’ನಕರ್ಮಣಾ ನಪ್ರಜಯಾ ಧನೇನ ತ್ಯಾಗೇನೈಕೇ ಅಮೃತತ್ವ ಮಾನಶುಃ’ ಎಂಬ ಉಪನಿಷತ್ತಿನ ಸಾಲುಗಳು ಬಹು ಪ್ರಖ್ಯಾತವಾದುದು. ತ್ಯಾಗದಿಂದಲೇ ಅಮೃತತ್ವವು ಎಂಬುದನ್ನು ಶ್ರುತಿಗಳು ಹೇಳುತ್ತವೆ.
ಎಲ್ಲರೂ ಬ್ರಹ್ಮಜ್ಞಾನಿಗಳಾಗಲು ಸಾಧ್ಯವೆ? ಆ ದಾರಿ ಅಷ್ಟೊಂದು ಸುಲಭವೇ ? ಎಂಬ ಪ್ರಶ್ನೆ ಬರುತ್ತದೆ.
ನನ್ನ ಮಿತ್ರರಾದ ಕೊಳ್ಳೇಗಾಲದ ಮಂಜುನಾಥರು ಒಮ್ಮೆ ನನಗೆ ಹೀಗೆ ಹೇಳಿದ್ದರು ( ಬಹುಷಃ ಅವರು ಹೇಳಿರುವುದು ಅವರಿಗೇ ಮರೆತು ಹೋಗಿರಬಹುದು !)
“ನೀವು ಒಂದು ಕೆಲಸ ಮಾಡಿಲ್ಲ ಅಂದ್ರೆ ಅದು ನಿಮ್ಮಿಂದ ಆಗೋದಿಲ್ಲ ಅಂತಾ ಅಲ್ಲ, ಅದು ನಿಮ್ಮ ಕೆಲಸದ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿಲ್ಲ, ಅಂದರೆ ನೀವು ಆ ಕೆಲಸಕ್ಕೆ ಪ್ರಾಶಸ್ತ್ಯ ಕೊಟ್ಟಿಲ್ಲ ಅಂತ ಅರ್ಥ ಅಷ್ಟೆ ” .
ಯಾವುದೂ ಅಸಾಧ್ಯವಲ್ಲ, ಆದರೆ ಆ ಕೆಲಸ ನಮ್ಮ ಅಜೆಂಡಾದಲ್ಲಿ ಟಾಪ್ ಪ್ರಿಯಾರಿಟಿ ಪಡೆದುಕೊಳ್ಳದೆ ಗುರಿಯನ್ನು ತಲುಪುವುದು ಕಷ್ಟಸಾಧ್ಯ ಎಂದು ಹೇಳಬಹುದು.
ಜ್ಞಾನಪ್ರಾಪ್ತಿಯಿಂದಲೇ(ಬ್ರಹ್ಮಜ್ಞಾನ) ಮುಕ್ತಿ ಎನ್ನುವುದಾದರೆ ಅದನ್ನು ಪಡೆಯುವ ದಾರಿ ಯಾವುದು? ಸಾಧನಗಳೇನು ? ಮುಂದಿನ ಕಂತಿನಲ್ಲಿ ಈ ವಿಚಾರವನ್ನು ತಿಳಿಯೋಣ.
अतो विमुक्यै प्रयतेत विद्वान् सन्यस्त बाह्यार्थ सुखस्पृहसन् |
संतं महातं समुपेत्य देशिकं तेनोपदिश्टार्थ समाहितात्मा ||८||
ದ್ರವ್ಯದಿಂದ, ವಿತ್ತದಿಂದ ಫಲದ ಮೇಲೆ ಬಯಕೆಗಳು ಉಂಟಾಗಿ ಜ್ಞಾನವರ್ಧನೆಗೆ ಅಡಚಣೆಯಾಗುವುದರಿಂದ ತಿಳುವಳಿಕೆಯುಳ್ಳವರು ಜ್ಞಾನಮಾರ್ಗದಿಂದಲೇ ಮುಮುಕ್ಷುತ್ವಕ್ಕೆ ಯತ್ನಿಸಬೇಕು ಎಂದು ಶ್ರೀ ಶಂಕರರು ಹೇಳುತ್ತಾರೆ.
ಕರ್ಮದಿಂದ , ಸಂಪತ್ತಿನಿಂದ ಮುಕ್ತಿಯು ದೊರಕುವುದಿಲ್ಲವಾದ್ದರಿಂದ ತಿಳುವಳಿಕೆಯುಳ್ಳವನು (ವಿದ್ವಾನ್) ಮಹಾತ್ಮರಾದ ಗುರುಗಳ ಸಂಗವನ್ನು ಹೊಂದಿ ಅವರ ಉಪದೇಶ ತತ್ತ್ವಗಳನ್ನು ಅರಿತು ಹೊರಗಿನ ಕ್ಷಣಿಕವಾದ ವಿಷಯಗಳ ಬಗೆಗೆ ಆಸಕ್ತಿಯನ್ನು ಬಿಟ್ಟು ಆತ್ಮಸಾಕ್ಷಾತ್ಕಾರಕ್ಕಾಗಿ ಯತ್ನಿಸಬೇಕು ಎಂಬುದು ಮೇಲಿನ ಶ್ಲೋಕದ ತಿರುಳು.
’ವಿದ್ವಾನ್’ ಎಂದರೆ ಆತ್ಮ ಮತ್ತು ಅನಾತ್ಮಗಳ (ಶಾಶ್ವತ ಮತ್ತು ಅಶಾಶ್ವತ) ವಿವೇಚನೆಯುಳ್ಳವನು ಎಂದು ತಿಳಿಯಬೇಕಾಗುತ್ತದೆ. ಹಾಗಾದರೆ ವಿದ್ವಾಂಸರಲ್ಲದವರಿಗೆ ಮುಕ್ತಿಯಿಲ್ಲವೇ ? ಎಂದರೆ, ಇದೆ !. ’ವಿದ್ವಾನ್’ ಎಂದು ಅನ್ನಿಸಿಕೊಳ್ಳುವವರೆಗೆ ಆತನು ಸಾಧನೆ ಮಾಡಿಕೊಂಡು ಬಂದರೆ ಮುಂದಿನ ಹಾದಿ ಸುಗಮವಾಗುತ್ತದೆ. ಏಳನೇ ತರಗತಿ ಮುಗಿಸಿದ್ದರೆ ಎಂಟಕ್ಕೆ ಸೇರಬಹುದು, ಇಲ್ಲವಾದರೆ ಕಷ್ಟ.
’ಬಾಹ್ಯಾರ್ಥ ಆಸೆಯನ್ನು ಬಿಡು’ ಎಂದರೆ , ಹೊರಗಿನ ವಿಷಯಗಳು (ಪ್ರಾಪಂಚಿಕ ಸುಖಗಳು) ಕ್ಷಣಿಕವಾದುದರಿಂದ ಅವುಗಳಿಂದ ಯಾವತ್ತೂ ನೆಮ್ಮದಿಯಿಲ್ಲ ಅಂತಹ ವಿಷಯಗಳ ಬಗೆಗೆ ಅತಿಯಾದ ಆಸಕ್ತಿಯು ಬೇಡ ’ ಎಂಬ ಅರ್ಥದಲ್ಲಿ ತಿಳಿದುಕೊಳ್ಳಬೇಕಾಗುತ್ತದೆ. ಲಕ್ಷ ರೂಪಾಯಿ ದುಡಿದು ತಂದರೆ ಬದುಕಿನ ಕೊನೆಯವರೆವಿಗೂ ಸಾಲುತ್ತದೆಯೇ ? . ಜಿಪುಣತನ ತೋರಿದರೂ ಒಂದು ವರುಷದಲ್ಲಿ ಮುಗಿಯುತ್ತದೆ. ಇಂತಹ ಅಶಾಶ್ವತ ಸಂಗತಿಗಳಿಗೆ ಮನಗೊಡದೆ
ಅಂತಹ ಆಸೆಗಳನ್ನು(ದುರಾಸೆ) ಬಿಟ್ಟು ವಿವೇಕಿಯಾದ ಗುರುವಿನ (’ದೇಶಿಕ’ ಎಂದರೆ ಇಲ್ಲಿ ಗುರು ಎಂದು ತಿಳಿಯುವುದು ಉತ್ತಮ) ಸಹವಾಸ ಮಾಡಿ ತನ್ನ ಇಷ್ಟಾರ್ಥವನ್ನು (ಆತ್ಮ ಸಾಕ್ಷಾತ್ಕಾರ) ಈಡೇರಿಸಿಕೊಳ್ಳುವುದು ಉತ್ತಮ ಎಂದು ಶ್ರೀ ಶಂಕರರು ತಿಳಿಸುತ್ತಾರೆ.
उद्धरेदात्मनात्मानं मग्नं संसारवारिधौ ।
योगारुढत्वमासाद्य सम्यग्दर्शननिष्ठया ॥९॥
ಮೇಲಿನ ಶ್ಲೋಕದ ಮೊದಲೆನೆಯ ಸಾಲು ’ಗೀತೆ’ಯ ವಾಕ್ಯವಾಗಿ ಬಹು ಪ್ರಸಿದ್ಧಿಯಾಗಿದೆ.
“ಉದ್ಧರೇದಾತ್ಮನಾತ್ಮಾನಂ ನಾತ್ಮಾನಮವಸಾದಯೇತ್ |
ಆತ್ಮೈವ ಹ್ಯಾತ್ಮನೋ ಬಂಧುರಾತ್ಮೈವ ರಿಪುರಾತ್ಮನಃ || ” ಎಂದು.
(ತನ್ನನ್ನು ತನ್ನಿಂದಲೇ ಉದ್ಧಾರಮಾಡಿಕೊಳ್ಳಬೇಕು, ತನ್ನನ್ನು ಕುಗ್ಗಿಸಿಕೊಳ್ಳಬಾರದು. ಏಕೆಂದರೆ ತಾನೇ ತನ್ನ ಬಂಧು ತಾನೇ ತನ್ನ ಶತ್ರು.)
ಸಂಸಾರಸಾಗರದಲ್ಲಿ ಮುಳುಗಿರುವವನಿಗೆ ನೆಮ್ಮದಿ ಎನ್ನುವುದು ಮರೀಚಿಕೆಯಾಗಬಹುದು ಅಥವಾ ಸಂಸಾರದಿಂದಲೇ ಯಾವತ್ತೂ ನೆಮ್ಮದಿ ಎನ್ನುವುದು ಸಾಧ್ಯವಾಗದೇ ಇರಬಹುದು. ಆದುದರಿಂದ ಕರ್ಮಬಂಧನಗಳಿಂದ ಬಿಡಿಸಿಕೊಳ್ಳಲು ಮೊದಲು ತನ್ನನ್ನು ತಾನು ಉದ್ಧಾರಮಾಡಿಕೊಳ್ಳಬೇಕು. ತನ್ನ ಪ್ರಜ್ಞೆಯನ್ನು ಎಚ್ಚರಗೊಳಿಸಿಕೊಳ್ಳಬೇಕು. ವೇದಾಂತಯೋಗದಲ್ಲಿ ನಿಷ್ಠೆಯಿರಿಸಿ ಸಮ್ಯಕ್ ದರ್ಶನ(ಆತ್ಮಜ್ಞಾನ)ವನ್ನು ಪಡೆದುಕೊಳ್ಳಬೇಕು ಎಂದು ಹೇಳುತ್ತಾರೆ.
ಸ್ವಾನುಭವಗಳಿಂದ ಪಾಠವನ್ನು ಕಲಿತು ಯಾರು ತನ್ನನ್ನು ತಾನು(ಅಂತರಂಗವನ್ನು) ಅರಿತುಕೊಳ್ಳುತ್ತಾನೋ ಅವನು ಜಾಗೃತವ್ಯಕ್ತಿ ಎನಿಸಿಕೊಳ್ಳುತ್ತಾನೆ. ಮನುಷ್ಯನ ಎಲ್ಲಾ ಏಳು-ಬೀಳುಗಳಿಗೆ ಮೂಲವಾಗಿ ಮನಸ್ಸೇ ಕಾರಣ. ಮನಸ್ಸಿನ ಹೊಯ್ದಾಟಗಳಿಗೆ ಕಡಿವಾಣ ಹಾಕಿ, ಇಂದ್ರಿಯ ವಿಷಯಗಳಲ್ಲಿ ಹತೋಟಿ ಸಾಧಿಸಿ ಸದಾ ಸಾಂಸಾರಿಕ ವಿಷಯಗಳಲ್ಲಿ ಮಗ್ನರಾಗಿರುವುದನ್ನು ಬಿಟ್ಟು ಎಚ್ಚರಗೊಳ್ಳಬೇಕು. ಆತ್ಮಶ್ರದ್ಧೆಯ ವಿಷಯದಲ್ಲಿ ವಿವೇಕಾನಂದರು ಮಿಂಚಿನಂತಹ ಮಾತೊಂದನ್ನು ಹೇಳುತ್ತಾರೆ . ” ಯಾರಿಗೆ ದೇವರಲ್ಲಿ ನಂಬಿಕೆಯಿಲ್ಲವೋ ಅವನನ್ನು ನಾಸ್ತಿಕ ಎಂದು ಹಿಂದಿನ ಧರ್ಮಗಳು ಹೇಳುತ್ತಿದ್ದವು, ಆದರೆ ನಾನು ಹೇಳುತ್ತೇನೆ ಯಾರಿಗೆ ಆತ್ಮಶ್ರದ್ಧೆ, ಆತ್ಮವಿಶ್ವಾಸವಿಲ್ಲವೋ ಅವನೇ ನಾಸ್ತಿಕ ” ಎಂದು. ವೈದ್ಯರು ಕಾಯಿಲೆಗೆ ಮದ್ದು ಕೊಟ್ಟರೆ ಅದನ್ನು ರೋಗಿಯು ತೆಗೆದುಕೊಳ್ಳದೆ ವೈದ್ಯರೇ ತೆಗೆದುಕೊಂಡರೆ ರೋಗಿಯ ಕಾಯಿಲೆ ಗುಣವಾಗುವುದಿಲ್ಲ. ನಾವೇ ಸಂಸಾರದ ಗೋಜಿನಲ್ಲಿ ( ಸಂಸಾರ ಎಂದಾಕ್ಷಣ ಕೇವಲ ಹೆಂಡತಿ-ಮಕ್ಕಳು ಎಂದು ತಿಳಿಯುವ ಅಗತ್ಯವಿಲ್ಲ) ಸಿಲುಕಿಕೊಂಡಿರುವುದರಿಂದ ಬಿಡಿಸಿಕೊಳ್ಳುವ ಹೊಣೆಯೂ ನಮ್ಮದೇ ಆಗಿದೆ.
’ಯೋಗ’ ಎಂದರೆ ಒಂದುಗೂಡಿಸುವುದು ಎಂದು ಅರ್ಥ. ಜೀವಾತ್ಮನನ್ನು ಪರಮಾತ್ಮನೊಂದಿಗೆ ಒಂದುಗೂಡಿಸುವುದಕ್ಕೆ ಯೋಗ ಎನ್ನುತ್ತೇವೆ. ’ಯೋಗಾರೂಢ ’ ಎಂಬಲ್ಲಿ ಶ್ರೀ ಶಂಕರರು ಪಾತಂಜಲ ಯೋಗವನ್ನಾಗಲೀ ಅಷ್ಟಾಂಗ ಯೋಗವನ್ನಾಗಲೀ ಹೆಸರಿಸದೆ ಕೇವಲ ವೇದಾಂತದ ಶ್ರವಣ-ಮನನ-ಸ್ವಾನುಭವದಿಂದ ಹುಟ್ಟುವ ಜ್ಞಾನಯೋಗವನ್ನು ಪ್ರತಿಪಾದಿಸುತ್ತಾರೆ ಎಂಬುದು ಸದ್ಗುರು ಚಂದ್ರಶೇಖರ ಭಾರತಿಗಳ ಒಕ್ಕಣೆ.
ಹಾಗಾದರೆ ಪಾತಂಜಲ, ಅಷ್ಟಾಂಗ ಮುಂತಾದ ಯೋಗಗಳೆಲ್ಲಾ ಬಳಕೆಗೆ ಬಾರದ್ದೇ ? ಎಂಬ ಪ್ರಶ್ನೆ ಬರುತ್ತದೆ. ’ಅಷ್ಟಾಂಗ, ಪಾತಂಜಲ ಮುಂತಾದ ಯೋಗಗಳನ್ನೆಲ್ಲಾ ಹೇಗಾದರೂ ( ಒಂದಷ್ಟು ಜನ್ಮಗಳಲ್ಲಿ) ಮುಗಿಸಿಕೊಂಡು ಬಂದಿದ್ದರೆ ಮುಂದೆ ವೇದಾಂತ ದರ್ಶನದಲ್ಲಿ ಆತ್ಮಜ್ಞಾನ ಸಿದ್ಧಿಸುತ್ತದೆ’ ಎನ್ನುವ ಅರ್ಥದಲ್ಲಿ ಹೇಳುತ್ತಾರೆ. ಕರ್ಮದಲ್ಲಿ ಪರಿಪಾಕಗೊಂಡಿರುವುದು ತಿಳಿಯುವುದಾದರೂ ಹೇಗೆ ? ಎಂದರೆ, ಅದು ತನ್ನಿಂತಾನೇ ತಿಳಿಯುವಂತಹುದು ಮತ್ತು ಸದ್ಗುರುಗಳಾದವರು ಅಂತಹವರನ್ನು ಗುರುತಿಸುತ್ತಾರೆ ಎಂದು ಹೇಳಬಹುದು. ಹಣ್ಣು ಮಾಗಿದ ನಂತರ ತನ್ನಿಂತಾನೇ ಕೆಳಗೆ ಬೀಳುತ್ತದೆ, ಹಾಗೆಯೇ ಇದೂ ಸಹ ಎನ್ನಬಹುದು. ’ಆರೂಢ’ ಎಂದರೆ ಬಲವಾಗಿ ನೆಲೆಸಿರುವವನು ಎಂದು ಅರ್ಥ. ವೇದಾಂತಯೋಗದಲ್ಲಿ ಅಚಲವಾದ ನಿಷ್ಠೆಯಿರಿಸಿಕೊಳ್ಳುವವನು ಯೋಗಾರೂಢನಾಗುತ್ತಾನೆ. ಅದರಿಂದಲೇ ಆತ್ಮಜ್ಞಾನವನ್ನು ಪಡೆಯುವುದು ತನ್ನನ್ನು ತಾನು ಉದ್ಧರಿಸಿಕೊಂಡಂತೆ ಎಂದು ಹೇಳುತ್ತಾರೆ.
सन्यस्य सर्वकर्माणि भवबंधविमुक्तये ।
यत्यातां पंडितैर्धिरैः आत्माभ्यास उपस्थितैः ॥१०॥
ಎಲ್ಲಾ ಕರ್ಮಗಳನ್ನೂ ಬಿಟ್ಟುಬಿಡಬೇಕು ಎಂದರೆ , ನಾವೆಲ್ಲಾ ಅವುಗಳನ್ನು ಕಟ್ಟಿಕೊಂಡಿದ್ದೇವೆ ಎಂದೇ ಅರ್ಥ. ಕಟ್ಟಿಕೊಂಡಿರುವವರು ಅದನ್ನು ಅನುಸರಿಸಿ ಅದರಿಂದಲೇ ಜ್ಞಾನವನ್ನು ಪಡೆಯಬೇಕಾಗುತ್ತದೆ. ಪಂಡಿತರು ಅಥವಾ ವಿದ್ವಾಂಸರು ಅವೆಲ್ಲದರಿಂದಲೂ ಹೊರತಾಗಿ ಕೇವಲ ಆತ್ಮತತ್ತ್ವಾನ್ವೇಷಣೆಯಲ್ಲಿ ನಿರತರಾಗಬೇಕಾಗುತ್ತದೆ. ಇಂತಹ ವಿವೇಕಿಗಳಿಗೆ ಮೂಲತಃ ಯಾವ ಕರ್ಮಗಳೂ ಒದಗಿಬಂದಿರುವುದಿಲ್ಲ, ಅಂತಹ ವಿವೇಕಿಗಳು ಜಗಕ್ಕೊಬ್ಬರು , ಯುಗಕ್ಕೊಬ್ಬರು ಎನ್ನಬಹುದು. (ಎಲ್ಲೋ ಒಬ್ಬ ಬುದ್ಧ, ಶಂಕರರಂತಹವರು). ಯಾವ ಕರ್ಮಗಳನ್ನೂ ಅನುಸರಿಸದೆ ಬ್ರಹ್ಮಜ್ಞಾನಿಗಳಾದವರಿದ್ದಾರೆ, ಅನುಸರಿಸಿಯೂ ಆದವರಿದ್ದಾರೆ. ಕರ್ಮವು ಆಚರಿಸುವಂತಹುದು ನಂಬಿಕೆಯ ಮೇಲೆ ನಿಂತಿರುವಂತಹುದು ಆದರೆ ಜ್ಞಾನವು ಹುಡುಕುವುದು ಅಥವಾ ಅನ್ವೇಷಣೆ ಮಾಡುವಂತಹುದು. ಇರುವ ಧರ್ಮಶಾಸ್ತ್ರಗಳಲ್ಲೇ ಅನ್ವೇಷಣೆ ಮಾಡುವಂತಹುದೇ ಹೊರತು ಹೊಸದಾಗಿ ಏನನ್ನೂ ಹುಟ್ಟಿಸುವುದಲ್ಲ. ಕರ್ಮವು comprehension ಆದರೆ ಜ್ಞಾನವು discover ಮಾಡುವಂತಹುದು.
ಸೇಡಿಯಾಪು ಕೃಷ್ಣಭಟ್ಟರೇನೂ(ಪಾಣಿನಿಯೂ ಅಷ್ಟೆ) ಇಲ್ಲದ ಭಾಷೆಗೆ ಸಲ್ಲದ ವ್ಯಾಕರಣವನ್ನು ಬರೆಯಲಿಲ್ಲ. ಇರುವ ಭಾಷೆಯ ನಿಯಮಗಳನ್ನು ಅಧ್ಯಯನ ಮಾಡಿ ಅದಕ್ಕೊಂದು ವ್ಯಾಕರಣ ರೂಪವನ್ನು ಕೊಟ್ಟದ್ದು. ಆಲ್ಬರ್ಟ್ ಐನ್‍ಸ್ಟಿನ್ ಕೂಡಾ ಪ್ರಕೃತಿಯಲ್ಲಿನ ನಿಯಮಗಳನ್ನು ಗಮನಿಸಿ, ಅಧ್ಯಯನ ಮಾಡಿ E=mc square ಎಂಬ ಸೂತ್ರವನ್ನು ಕೊಟ್ಟಿದ್ದೇ ಹೊರತು ಹೊಸತೇನನ್ನೂ ಹುಟ್ಟಿಸಲಿಲ್ಲ.
ಹೀಗೆ ಧೀರರಾದವರು ಸರ್ವಕರ್ಮಗಳನ್ನೂ ತ್ಯಜಿಸಿ ಮುಮುಕ್ಷುತ್ವಕ್ಕಾಗಿ ಯತ್ನಿಸಬೇಕು ಎಂದು ಶ್ರೀ ಶಂಕರರು ಹೇಳುತ್ತಾರೆ.
चित्तस्य शुद्धये कर्म न तु वस्तूपलब्धये ।
वस्तुसिद्धिर्विचरेण न किज्ञ्चित् कर्मकोटिभिः ॥११॥
ವಸ್ತುಸಿದ್ಧಿರ್ವಿಚಾರೇಣ ನ ಕಿಂಚಿತ್ ಕರ್ಮಕೋಟಿಭಿಃ ||೧೧||
(=ವೈಚಾರಿಕತೆಯಿಂದ ಜ್ಞಾನ; ಕೋಟಿ ಕರ್ಮಾಚರಣೆಯಿಂದಲ್ಲ)
ಕರ್ಮಗಳನ್ನು ಆಚರಿಸುವುದರಿಂದ ಮುಕ್ತಿಯಂತೂ ದೊರೆಯುವುದಿಲ್ಲ ಎಂದಾದಲ್ಲಿ ಅವುಗಳನ್ನು ಆಚರಿಸುವುದಾದರೂ ಏಕೆ ? ಎಂಬ ಪ್ರಶ್ನೆಗೆ ಮೇಲಿನ ಶ್ಲೋಕದ ಮೂಲಕ ಶಂಕರರು ಉತ್ತರವನ್ನು ತಿಳಿಸುತ್ತಾರೆ.
’ಚಿತ್ತಶುದ್ಧಿಗಾಗಿ ಕರ್ಮ’ ಎಂದು ಹೇಳುತ್ತಾರೆ. ಬುದ್ಧಿಗೆ ಆವರಿಸುವ ಭ್ರಮೆ ಅಥವಾ ಅಜ್ಞಾನವನ್ನು ತೊಡೆದುಹಾಕಲು ಕರ್ಮಗಳನ್ನು ಆಚರಿಸಬೇಕು ಎನ್ನುತ್ತಾರೆ. ಮೊದಲು ಅಜ್ಞಾನವನ್ನು ಕಳೆದುಕೊಂಡರೆ ಜ್ಞಾನದ ಮಾರ್ಗ ಯಾವುದು ಎಂದು ತಂತಾನೇ ಕಾಣಿಸುತ್ತದೆ. ಜ್ಞಾನಸಿದ್ಧಿಗೆ ಬೇಕಾಗುವ ಧೃಡತೆ, ಏಕಾಗ್ರತೆ, ಸಹಿಷ್ಣುತೆ ಇತ್ಯಾದಿಗಳು ಮಾಡುವ ಕರ್ಮದಿಂದ ನೆಲೆಗೊಳ್ಳುತ್ತವೆ ಮತ್ತು ಸಾಧನೆಯ ಹಾದಿಗೆ ದಾರಿದೀಪವಾಗುತ್ತದೆ. ಸಮಚಿತ್ತಕ್ಕಾಗಿ ಕರ್ಮವೇ ಹೊರತು ಆತ್ಮವಸ್ತುವನ್ನು ಅಥವಾ ಆತ್ಮಜ್ಞಾನವನ್ನು ಪಡೆಯಲು ಅಲ್ಲ ಎಂದು ಹೇಳುತ್ತಾರೆ.
ಮೇರುಪರ್ವತವನ್ನು ಅಥವಾ ಎವರೆಸ್ಟ್ ಅನ್ನು ಏರಬೇಕೆನ್ನುವವರು ಅದಕ್ಕೆ ಬೇಕಾಗುವ ಎಲ್ಲಾ ಸಿದ್ಧತೆಗಳನ್ನೂ ಮಾಡಿಕೊಳ್ಳಬೇಕಾಗುತ್ತದೆ. ಕೆಲವು ಏರುವುದಕ್ಕೆ ಮುಂಚೆ ಬೇಕಾದ ತಯಾರಿಗಳು ಮತ್ತು ಕೆಲವು ಏರುವಾಗ ಬೇಕಾಗುವ ತಯಾರಿಗಳು ಇರುತ್ತವೆ. ಶಿಖರವನ್ನು ಏರಬೇಕೆಂದು ಮನಸು ಮಾಡಿದವನು ಮೊದಲು ಧೃಡಾಕಾಯನಾಗಿರಬೇಕಾಗುತ್ತದೆ. ಗರಡಿಮನೆಯ ವ್ಯಾಯಾಮಗಳನ್ನು ಮಾಡಿಕೊಂಡು ಗಟ್ಟಿಮುಟ್ಟಾಗಿರಬೇಕಾಗುತ್ತದೆ. ಇದಕ್ಕೆ ಕೆಲವು ತಿಂಗಳುಗಳು ಬೇಕಾಗುತ್ತದೆ. ಉಸಿರನ್ನು ನಿಯಂತ್ರಿಸಿಕೊಳ್ಳುವ ಸಾಮರ್ಥ್ಯವನ್ನು ಕೆಲವು ವಾರಗಳ ಅಭ್ಯಾಸದಿಂದ ಪಡೆದುಕೊಳ್ಳಬೇಕಾಗುತ್ತದೆ. ಆರೋಗ್ಯದಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಇಷ್ಟೆಲ್ಲಾ ಕರ್ಮಗಳನ್ನು ಏರುವವನು ಮುಂಚೆಯೇ ಮುಗಿಸಿ ಸಿದ್ಧನಾಗಿರಬೇಕಾಗುತ್ತದೆ. ನಂತರ ಪರ್ವತವನ್ನು ಏರುವಾಗ ಈ ಹಿಂದಿನ ಯಾವ ಸಾಧನಗಳು ಬೇಕಾಗುವುದಿಲ್ಲ, ಇಲ್ಲಿ ಬೇರೆಯದೇ ಸಾಧನಗಳು ಬೇಕಾಗುತ್ತವೆ. ಬೆಚ್ಚಗಿನ ಉಣ್ಣೆಯ ಬಟ್ಟೆ, ಆಮ್ಲಜನಕದ ಸಿಲಿಂಡರ್, ಹಿಮನಿರೋಧಕ ಬೂಟುಗಳು, ಕೈ ಗವಸುಗಳು ಇತ್ಯಾದಿ. ಇವೆಲ್ಲಾ ಗರಡಿಮನೆಯ ತಯಾರಿಯಲ್ಲಿ ಬೇಕಾಗುವುದಿಲ್ಲ. ಹೇಗೂ ಹಿಮಾಲಯ ಏರಲೇಬೇಕು ಅದಕ್ಕಾಗಿ ಬೂಟು, ಗವಸು, ಉಣ್ಣೆಯ ಬಟ್ಟೆ ಇವುಗಳನ್ನೆಲ್ಲಾ ಹಾಕಿಕೊಂಡೇ ವ್ಯಾಯಾಮ ಮಾಡುತ್ತೇನೆಂದು ಹೇಳುವವನನ್ನು ಮೂಳನೆನ್ನಬೇಕಾಗುತ್ತದೆ. ಗರಡಿಮನೆಯ ವ್ಯಾಯಾಮವು ಕರ್ಮಕ್ಕೆ ಸಾಧನವಾದರೆ ಏರುವಾಗ ಬೇಕಾಗುವ ವಸ್ತುಗಳು ಜ್ಞಾನಕ್ಕೆ ಸಾಧನಗಳು. ಇವು ಒಂದನ್ನೊಂದು ಸಂಪರ್ಕಿಸುವುದಿಲ್ಲ. ಕೇವಲ ಗಟ್ಟಿಮುಟ್ಟಾದ ದೇಹವನ್ನು ಹೊಂದಿದ ಮಾತ್ರಕ್ಕೆ ಹಿಮಾಲಯವನ್ನು ಏರಿದಂತಾಗುತ್ತದೆಯೇ? ಇಲ್ಲ ; ಅದು ಪರೋಕ್ಷವಾಗಿ ಸಹಾಯ ಮಾಡುತ್ತದೆ ಆದರೆ ಜ್ಞಾನಪ್ರಾಪ್ತಿಯ ಸಾಧನಗಳ ಮುಂದೆ ಅದು ಗೌಣವಾಗುತ್ತದೆ. ಆಮ್ಲಜನಕದ ಸಿಲಿಂಡರ್ ಇಲ್ಲದೆ ಯಾರೂ ಎವರೆಸ್ಟನ್ನು ಏರಲಾರರು !. ಕೆಲವರು ಗರಡಿಮನೆಯಲ್ಲಿ ಪಳಗದೆಯೂ ಸಹ ಆಮ್ಲಜನಕದ ಸಿಲಿಂಡರ್, ಉಣ್ಣೆಯ ಬಟ್ಟೆ, ಇತ್ಯಾದಿ ಸಾಧನಗಳನ್ನಿಟ್ಟುಕೊಂಡು ಮನೋಬಲದಿಂದ (ಮನಸಿನಂತೆ ಮಹಾದೇವ !) ಎವರೆಸ್ಟ್ ಏರಿದರೂ ಏರಬಹುದು !. ಅಂತಹವರು ತುಂಬಾ ವಿರಳ ಎನ್ನಬೇಕಾಗುತ್ತದೆ. ಅಂತಹ ಮನೋಬಲವುಳ್ಳವರು ಆತ್ಮಜ್ಞಾನಕ್ಕೆ ನೇರವಾಗಿ ಅರ್ಹರಾಗುತ್ತಾರೆ.
ವಿಚಾರಮಂಥನದಿಂದ ಮಾತ್ರ ಜ್ಞಾನಪ್ರಾಪ್ತಿಯೇ ಹೊರತು ಹಲವು ಕೋಟಿ ಕರ್ಮಗಳನ್ನು ಆಚರಿಸುವುದರಿಂದಲ್ಲ ಎಂದು ಎರಡನಯೆ ಸಾಲಿನಲ್ಲಿ ಹೇಳುತ್ತಾರೆ. ವಿವೇಕ ಚೂಡಾಮಣಿಯನ್ನು ಓದಿ ಪಡೆಯುವ ಜ್ಞಾನಕ್ಕಿಂತಲೂ ಅಲ್ಲಿರುವ ವಿಚಾರವನ್ನು ಚರ್ಚಿಸಿ, ವಿವೇಚಿಸಿ ಪಡೆಯುವ ಜ್ಞಾನವು ಉನ್ನತಮಟ್ಟದ್ದಾಗಿರುತ್ತದೆ. ತತ್ತ್ವವಿಚಾರದ ಚರ್ಚೆಗಳು ನಡೆದಂತೆಲ್ಲಾ ಆತ್ಮಜ್ಞಾನದ ಒಲವು ಹೆಚ್ಚುತ್ತಾ ಹೋಗುತ್ತದೆ. ವಿವೇಚಿಸದೆ , ವಿಚಾರವಿಲ್ಲದೇ ಮಾಡುವ ಕೋಟಿ ಕರ್ಮಗಳಿಗಿಂತಲೂ ವೈಚಾರಿಕತೆಯಿಂದ ಬರುವ ತಿಳುವಳಿಕೆ ಅಥವಾ ಆತ್ಮಜ್ಞಾನವೇ ಉನ್ನತವಾದುದು ಎಂದು ಶಂಕರರು ತಿಳಿಸುತ್ತಾರೆ.
ಹೀಗೆ ಕರ್ಮ-ಜ್ಞಾನಗಳು ಒಂದನ್ನು ಬಿಟ್ಟು ಮತ್ತೊಂದಿಲ್ಲ. ಚಿತ್ತ ಶುದ್ಧಿಯಾಗದ ಹೊರತು ಜ್ಞಾನಪ್ರಾಪ್ತಿಗೆ ಅವಕಾಶವಿಲ್ಲ. ಅಜ್ಞಾನವನ್ನು ತೊರೆಯಲು ಕರ್ಮಗಳು ಸಹಾಯಕವಾಗುತ್ತವೆ ಆದರೆ ಆತ್ಮಜ್ಞಾನಕ್ಕೆ ಬೇರೆಯದೇ ಆದ ದಾರಿಯನ್ನು ಹುಡುಕಬೇಕಾಗುತ್ತದೆ.
ಅಜ್ಞಾನ ಅಥವಾ ಭ್ರಮೆಯು ಹೇಗೆ ತೋರುತ್ತದೆ ಎನ್ನುವುದನ್ನು ಮುಂದಿನ ಶ್ಲೋಕದಲ್ಲಿ ನಿರೂಪಿಸುತ್ತಾರೆ.
सम्यग् विचारतः सिद्धा रज्जुतत्वावधारणा ।
भ्रान्त्योदितमहासर्पभवदुःखविनाशिनी ॥१२॥
ಕರ್ಮದಿಂದಲೇ ಮುಕ್ತಿ ಎಂದು ತಿಳಿದು ಆತ್ಮತತ್ತ್ವಾನ್ವೇಷಣೆಯನ್ನೇ ನೆಡೆಸದಿರುವುದು ಹಗ್ಗವನ್ನೇ ಹಾವೆಂದು ಭ್ರಮಿಸಿದಂತೆ ಮತ್ತು ಆತ್ಮಜ್ಞಾನವು ಬಂದೊಡನೆಯೆ ಅಂತಹ ಭ್ರಮೆಯು ತಾನಗೇ ತೊಲಗುವುದು ಎಂದು ಮೇಲಿನ ಶ್ಲೋಕದ ಮೂಲಕ ಹೇಳುತ್ತಾರೆ. ಸರ್ಪ-ರಜ್ಜು (=ಹಗ್ಗ) ತತ್ತ್ವವು ವೇದಾಂತದರ್ಶನದ ಮಹತ್ವದ ಪ್ರಕ್ರಿಯೆಯಾಗಿದೆ. ಭ್ರಮೆಯಲ್ಲಿದ್ದಾಗ ಹಗ್ಗವು ಹಾವಿನ ರೂಪದಲ್ಲಿ ತೋರಬಹುದು. ಕತ್ತಲಲ್ಲಿ ಪಂಜನ್ನು ಹಿಡಿದು ನೆಡೆದು ಹೋದವರನ್ನು ಕೊಳ್ಳಿದೆವ್ವವೆಂದು ಭ್ರಮಿಸಿ ವಾರಗಳ ಕಾಲ ಭಯದಿಂದ ತತ್ತರಿಸುವ ಪ್ರಮೇಯವೂ ಇರುತ್ತದೆ. ಹರೆಯದ ಮಾಯೆಯಲ್ಲಿ ಕತ್ತೆಯೂ (ಕತ್ತೆಗಳಲ್ಲಿ ಕ್ಷಮೆಯಾಚಿಸುತ್ತೇನೆ, ಅದು ನನ್ನ ಇಷ್ಟದ ಪ್ರಾಣಿ) ಸುಂದರವಾಗಿ ಕಾಣುತ್ತದೆ ಎಂಬ ಮಾತಿದೆ. ಕತ್ತಲಿನಲ್ಲಿ ’ಸರ-ಸರ’ ಎಂದು ಸದ್ದಾದಾಗ ಅಲ್ಲಿ ಹಾವಿರುವುದೆಂಬ ಭ್ರಮೆಯಿಂದ ಭಯಗೊಂಡವರು ದೀಪದ ಬೆಳಕಿನಲ್ಲಿ ನೋಡಿದಾಗ ಅದು ಹೆಗ್ಗಣವೋ ಮತ್ತೊಂದೋ ಆಗಿರುವುದು ತಿಳಿದಾಗ ಅವರ ಬುದ್ಧಿಗೆ ಬಡಿದಿದ್ದ ಮಂಕು ತೆರೆಯುತ್ತದೆ. ಆ ಕ್ಷಣಕ್ಕೆ ಹಗ್ಗವೇ ಹಾವಿನಂತೆ ಕಂಡರೂ ವಿಚಾರಿಸಿ, ವಿವೇಚಿಸಿ ನೋಡಿದಾಗ ವ್ಯತ್ಯಾಸವು ತಿಳಿದು ಭ್ರಮೆಯು ಅಳಿಯುತ್ತದೆ. ಚಿತ್ತಶುದ್ಧಿಗಾಗಿ ಕರ್ಮ. ಕರ್ಮದಲ್ಲಿ ಪರಿಪಾಕಗೊಂಡ ನಂತರ ಆತ್ಮತತ್ತ್ವಾನ್ವೇಷಣೆಯ ದಾರಿ. ಈ ದಾರಿಯಲ್ಲಿ ಸಾಗುತ್ತಿದ್ದಂತೆಯೆ ಹಗ್ಗವೇ ಮಾಹಸರ್ಪ ಎಂದು ತಿಳಿದ ಭ್ರಾಂತಿಯು ನೀಗಿ ವಿಚಾರದಿಂದಲೇ ಜ್ಞಾನ ಎಂಬುದು ನಿಕ್ಕಿಯಾಗುತ್ತದೆ.
ಒಂದು ಲೌಕಿಕದ ಉದಾಹರಣೆಯನ್ನು ಇಲ್ಲಿ ನೋಡೋಣ; ಬೊಂಬಾಯಿ ಬೋಂಡವನ್ನು ಮಾಡಲು ಹಿಟ್ಟನ್ನು ಕಲೆಸಿ ಅದನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಟ್ಟುರುತ್ತೇವೆ. ಕಾದಿರುವ ಎಣ್ಣೆಗೆ ಆ ಉಂಡೆಗಳನ್ನು ಹಾಕಿದಾಗ ಅದು ಸದ್ದುಮಾಡಿಕೊಂಡು ಬೇಯುತ್ತದೆ, ಬೆಂದ ನಂತರ ಸುಮ್ಮನಾಗುತ್ತದೆ. ಬೋಂಡದ ಉಂಡೆಯು ಬೇಯುವುದಕ್ಕೆ ಮುಂಚೆಯೂ ಸುಮ್ಮನಿತ್ತು. ಈಗ ಎರಡರ ಗುಣವನ್ನೂ ಒಂದೇ ಎನ್ನಲು ಸಾಧ್ಯವೆ ?!. ಬೇಯದ ಬೋಂಡವು ಕರ್ಮವನ್ನು ಮಾಡಿಲ್ಲದ ಜೀವವಾದರೆ ಬೆಂದಿರುವ ಬೋಂಡವು ಕರ್ಮವನ್ನು ಮೀರಿರುತ್ತದೆ !. ಎಣ್ಣೆಯಲ್ಲಿ ಚೆನ್ನಾಗಿ ಬೆಂದು ( ಕರ್ಮದಲ್ಲಿ ಪರಿಪಾಕಗೊಂಡು) ತೆಪ್ಪಗಾಗಿರುತ್ತದೆ. ಮುಂದೆ ಅದು ಒಬ್ಬರ ಹೊಟ್ಟೆಯನ್ನು ಸೇರಲು ಅರ್ಹತೆಯನ್ನು ಪಡೆದುಕೊಂಡಿರುತ್ತದೆ. (ಕನ್ನಡದ “ಭಕ್ತ ಕುಂಬಾರ” ಚಲನಚಿತ್ರ ನೋಡಿುವವರು , ಚಿತ್ರದಲ್ಲಿ ಕುಂಬಾರನ ಪಾತ್ರ ವಹಿಸಿರುವ ರಾಜಕುಮಾರರು ತಮ್ಮ ಮನೆಯಲ್ಲಿ ಸೇರಿದ್ದ ಸಂತರುಗಳ ತಲೆಯನ್ನು ಕುಟ್ಟಿ ’ಇದು ಬೆಂದಿಲ್ಲ, ಇದು ಅರ್ಧ ಬೆಂದಿದೆ, ಇದು ಮುಕ್ಕಾಲು’ ಎಂದು ಹೇಳುವ ಸನ್ನಿವೇಶವನ್ನು ನೆನೆಪಿಸಿಕೊಳ್ಳಬಹುದು !). ಬೇಸಾಯ ಮಾಡಲು ಕುದುರೆಯು ಬೇಡವಾದರೆ ಏನಂತೆ ? ಟಾಂಗಾ ಗಾಡಿಗಾದರೂ ಬೇಕಲ್ಲವೆ !. ಹೀಗೆ ಮುಕ್ತಿಗೆ ಕರ್ಮವಲ್ಲದಿದ್ದರೂ , ಭ್ರಮೆಯಿಂದ ಹೊರಬರಲು ಮತ್ತು ಚಿತ್ತಶುದ್ಧಿಗಾಗಿ ಕರ್ಮವು ಬೇಕಾಗುತ್ತದೆ ಮತ್ತು ವಿಚಾರದಿಂದಲೇ ಆತ್ಮಜ್ಞಾನ ಎನ್ನುವುದನ್ನು ಶಂಕರರು ತಿಳಿಸುತ್ತಾರೆ.

Source : http://chudamaniviveka.blogspot.in/

Author : Subrahmanya

1 Response to ವಿವೇಕ ಚೂಡಾಮಣಿ

  1. Subrahmanya

    ಎಲ್ಲಿಂದ ತೆಗೆದುಕೊಂಡಿದ್ದೀರಿ ಸ್ವಾಮಿ ಈ ಲೇಖನವನ್ನು ?

Leave a Reply